ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೊರೊನಾ ಎರಡನೇಯ ಅಲೆಯ ಆರ್ಭಟ ಯಾವ ರೀತಿ ಎಂದು ನಾವು ನೋಡುತ್ತಿದ್ದೇವೆ. ಇದರ ಬೆನ್ನಲ್ಲೇ ತಜ್ಞರ ಸಲಹಾ ಸಮಿತಿ ಆಘಾತಕಾರಿ ಮಾಹಿತಿಯೊಂದು ಹೊರ ಹಾಕಿದೆ.
ಹೌದು.. ಈ ಹಿಂದೆ ತಜ್ಞರ ಸಲಹಾ ಸಮಿತಿ 2020 ಜುಲೈ ವೇಳೆ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುತ್ತೆ. 2021 ಮೇ ವೇಳೆಗೆ ರಾಜ್ಯದಲ್ಲಿ ಎರಡನೇ ಅಲೆಯ ಆರ್ಭಟ ತೀವ್ರ ಸ್ವರೂಪದಲ್ಲಿರುತ್ತೆ. ಸರಿಯಾದ ಕ್ರಮಗಳನ್ನು ಕೈಗೊಳ್ಳದೇ ಇದ್ರೆ ಪರಿಸ್ಥಿತಿ ಕೈ ಮೀರುತ್ತೆ ಅಂದಿದ್ದರು. ಅವರು ಹೇಳಿದಂತೆಯೇ ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಇದೆ. ಅವರ ಎಚ್ಚರಿಕೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ನಾವೀಗ ಎದುರಿಸುತ್ತಿದ್ದೇವೆ.
ಹೀಗಿರುವಾಗಲೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಅನ್ನೋ ವಾರ್ನಿಂಗ್ ಕೊಟ್ಟಿದ್ದಾರೆ. ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗುತ್ತೆ ಎಂದಿದ್ದಾರೆ. ಅಲ್ಲದೇ ಇದು ಈ ವರ್ಷಾಂತ್ಯದವರಗೂ ಮುಂದುವರೆಯುತ್ತೆ ಎಂದು ತಜ್ಞರ ಸಲಹಾ ಸಮಿತಿಯ ಮುಖ್ಯಸ್ಥ ಡಾ ಎಂ ಕೆ ಸುದರ್ಶನ್ ಹೇಳಿದ್ದಾರೆ.
ಇನ್ನು ಕೊರೊನಾ ಎರಡನೇ ಅಲೆಯಲ್ಲಿ ಮುಖ್ಯವಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ರೆ ಕೊರೊನಾ ಮೂರನೇ ಅಲೆಯಲ್ಲಿ 18 ವರ್ಷಕ್ಕಿಂತ ಕೆಳಪಟ್ಟವರು ಹಾಗೂ ಮಕ್ಕಳು ತೊಂದರೆ ಅನುಭವಿಸಲಿದ್ದಾರೆ ಎಂದಿದ್ದಾರೆ. ಅಲ್ದೆ ಮೂರನೇ ಅಲೆಯಲ್ಲಿ ಈಗಾಗಲೇ ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಹಿರಿಯ ನಾಗರೀಕರು ಮೂರನೇ ಅಲೆಯಲ್ಲಿ ಸೇಫ್ ಆಗಿರಲಿದ್ದಾರೆ ಎಂದಿದ್ದಾರೆ.
ಇನ್ನು ಈಗಾಗಲೇ ಎರಡನೇ ಅಲೆಯಲ್ಲಿ ಸರಿಯಾದ ಪೂರ್ವಸಿದ್ಧತೆಯನ್ನು ಸರ್ಕಾರ ಮಾಡಿಕೊಳ್ಳದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಆಕ್ಸಿಜನ್ , ಬೆಡ್, ಚಿಕಿತ್ಸೆ ಇದು ಯಾವುದೂ ಕೂಡ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಮೂರನೇ ಅಲೆಯನ್ನು ಎದುರಿಸೋದಕ್ಕೆ ಸರಿಯಾದ ಸಿದ್ಧತೆಯನ್ನು ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಅಪಾಯ ಖಂಡಿತಾ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಹಾಗಾಗಿ ಜನ ಸೇರುವಂತಹ ಕಾರ್ಯಕ್ರಮಗಳಾದ ಜಾತ್ರೆ, ಧಾರ್ಮಿಕ ಸಮಾರಂಭಗಳು, ಶುಭ ಸಮಾರಂಭಗಳು, ರ್ಯಾಲಿ, ರಾಜಕೀಯ ಕಾರ್ಯಕ್ರಮಗಳು ಇವೆಲ್ಲವುದಕ್ಕೆ ಬ್ರೇಕ್ ಹಾಕಿ ಎಂದಿದ್ದಾರೆ. ಆದರೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಅಂತಾ ಕಾದು ನೋಡ್ಬೇಕಾಗಿದೆ.