ಬೆಂಗಳೂರು: ರಾಜ್ಯದಲ್ಲಿ ಸದ್ಯ ಮಸೀದಿಗಳ ಮೇಲೆ ಅಳವಡಿಸಿರುವ ಲೌಡ್ ಸ್ಪೀಕರ್ ತೆರವಿಗೆ ಆಗ್ರಹ ಜೋರಾಗಿದೆ. ಇದರ ನಡುವೆ ಮಸೀದಿಗಳೇ ಹೆಚ್ಚು ರೂಲ್ಸ್ ಬ್ರೇಕ್ ಮಾಡಿರೋದು ಕಂಡುಬಂದಿದೆ. ಪೊಲೀಸ್ ಇಲಾಖೆ ಹೈಕೋರ್ಟ್ ಗೆ ಸಲ್ಲಿಸಿರುವ ದಾಖಲೆಗಳೇ ಇದನ್ನ ಖಚಿತಪಡಿಸಿದೆ. ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆಯ ನಿಯಮವನ್ನ ಮೀರಿರುವುದಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. 2021 ರಿಂದ ಫೆಬ್ರವರಿ 2022 ತನಕ ಒಟ್ಟು 301 ನೋಟಿಸ್ ಪೊಲೀಸರು ನೀಡಿದ್ದಾರೆ. ಇದರಲ್ಲಿ 125 ನೋಟಿಸ್ ಮಸೀದಿಗಳಿಗೆ ನೀಡಲಾಗಿದೆ.
ವಿಶ್ವ ಹಿಂದೂ ಪರಿಷತ್ ನ ಗಿರೀಶ್ ಭಾರದ್ವಾಜ್ ಎಲ್ಲಾ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳನ್ನ ನಿಷೇಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ವೇಳೆ ಹೈಕೋರ್ಟ್ ಕೇಳಿದ ಮಾಹಿತಿಯನ್ನ ಪೊಲೀಸ್ ಇಲಾಖೆ ಒದಗಿಸಿದೆ. ಈ ದಾಖಲೆಗಳಲ್ಲಿ ಬೆಂಗಳೂರಿನ ಏಳು ವಲಯಗಳಲ್ಲಿ ಪೊಲೀಸರು ಬಾರ್ ಅಂಡ್ ರೆಸ್ಟೊರೆಂಟ್, ಪಬ್, ಕ್ಲಬ್, ಕೈಗಾರಿಕೆಗಳು, ಮಸೀದಿ, ದೇವಾಲಯ, ಚರ್ಚ್ ಗಳಿಗೆ ಎಷ್ಟು ನೋಟಿಸ್ ನೀಡಿದ್ದಾರೆ ಎಂಬುದನ್ನ ಕೋರ್ಟ್ ಗೆ ತಿಳಿಸಲಾಗಿದೆ.
ಪೊಲೀಸ್ ದಾಖಲೆಗಳಲ್ಲಿ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ ಹೆಚ್ಚು ದೂರುಗಳು ಬಂದಿದ್ದು ಹೆಚ್ಚು ನೋಟಿಸ್ ಕೂಡ ಮಸೀದಿಗಳಿಗೆ ನೀಡಲಾಗಿದೆ. ದೇವಸ್ಥಾನ ಹಾಗೂ ಚರ್ಚ್ ಗಳಿಗೆ ಹೋಲಿಸಿದ್ರೆ ಮಸೀದಿಗಳಲ್ಲೆ ಹೆಚ್ಚು ಶಬ್ದ ಮಾಲಿನ್ಯದ ನಿಯಮ ಮೀರಿರುವುದು ಕಂಡುಬಂದಿದೆ.