ನವದೆಹಲಿ: ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಜಿ ಪೆರಾರಿವಾಲನ್ಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ಪೀಠವು ಆರೋಪಿಯೂ 30 ವರ್ಷಗಳಿಂದ ಜೈಲಿನಲ್ಲಿದ್ದು, ಜೈಲಿನೊಳಗೆ ಮತ್ತು ಪೆರೋಲ್ ಅವಧಿಯಲ್ಲಿ ಅವರ ನಡವಳಿಕೆಯು ತೃಪ್ತಿಕರವಾಗಿದೆ ಎಂದು ಸಲ್ಲಿಸಿದ ವರದಿಯನ್ನು ಗಮನಿಸಿ ಜಾಮೀನು ನೀಡಿದೆ.
ಇನ್ನೊಂದೆಡೆ ಎಂಡಿಎಂಎ ತನಿಖೆ ಪೂರ್ಣಗೊಳ್ಳುವವರೆಗೆ ಪ್ರಕರಣದಲ್ಲಿ ತನ್ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ 47 ವರ್ಷದ ಪೆರಾರಿವಾಲನ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ವಿಚಾರಣಾ ನ್ಯಾಯಾಲಯದ ಷರತ್ತುಗಳ ಪ್ರಕಾರ ಜಾಮೀನು ನೀಡಲಾಗುವುದು ಎಂದು ಪೀಠ ಹೇಳಿದ್ದು, ಅರ್ಜಿದಾರರು ಪ್ರತಿ ತಿಂಗಳ ಮೊದಲ ವಾರದಲ್ಲಿ ಜೋಲಾರ್ಪೆಟ್ಟೈ ನಲ್ಲಿರುವ ಸ್ಥಳೀಯ ಪೊಲೀಸರಿಗೆ ವರದಿ ಮಾಡಬೇಕು ಎಂದು ಸೂಚಿಸಿದೆ.