ಕೋಟ: ಕಾನೂನು ಬಾಹಿರವಾಗಿ ಮಗುವೊಂದನ್ನು ದತ್ತು ಪಡೆದ ದಂಪತಿ, ನೀಡಿದ ದಂಪತಿ, ಪ್ರಕರಣದಲ್ಲಿ ಭಾಗಿಯಾದ ಮಧ್ಯವರ್ತಿಗಳು, ವೈದ್ಯಾಧಿಕಾರಿಗಳ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕರಣ ದಾಖಲಿಸಿದೆ.
ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ ಹಿಂದೂ ದಂಪತಿಗಳಿಗೆ ಜನಿಸಿದ ಮಗುವನ್ನು 80 ಸಾವಿರ ರೂ. ಹಾಗೂ ಆಸ್ಪತ್ರೆಯ ಬಿಲ್ ಕಟ್ಟಿ, ಉಡುಪಿಯ ಹುಸೈನ್ ಎಂಬ ಮಧ್ಯವರ್ತಿಯ ಮೂಲಕ ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ಅವರ ನೆರವು ಪಡೆದು ಹಂಗರಕಟ್ಟೆಯ ಮುಸ್ಲಿಂ ದಂಪತಿಗಳು ದತ್ತು ಪಡೆದಿದ್ದರು.
ಚಿಕ್ಕಮಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಾಹಿತಿಯನ್ನು ಆಧರಿಸಿ ಉಡುಪಿ ಜಿಲ್ಲಾ ತಂಡವು ಕೋಟ ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ದತ್ತು ಪಡೆದ ಮುಸ್ಲಿಂ ದಂಪತಿಗಳಿಗೆ ವಿವಾಹವಾಗಿ 10 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎನ್ನುವ ಕಾರಣಕ್ಕೆ 80 ಸಾವಿರ ರೂ. ಹಾಗೂ ಆಸ್ಪತ್ರೆಯ ಬಿಲ್ ನೀಡಿ ಮಗುವನ್ನುಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ನೆರವಿನಿಂದ ಜನನ ಪ್ರಮಾಣ ಪತ್ರವನ್ನು ಮಾಡಿಸಿಕೊಂಡು ಪಡೆದಿದ್ದರು ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ದ ಬಾಲನ್ಯಾಯ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿದೆ. 1.2 ವರ್ಷದ ಹೆಣ್ಣು ಮಗುವನ್ನು ಕಾನೂನು ಬಾಹಿರ ದತ್ತು ಪಡೆದವರಿಂದ ರಕ್ಷಿಸಿ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ, ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ .ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ .ಕೋಟಾ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ. ಪಿ., ಸಹಾಯಕ ಉಪ ನಿರೀಕ್ಷಕಿ ಮುಕ್ತಾ ಭಾಗವಹಿಸಿದ್ದರು.