ಸುಳ್ಯ: ಇಲ್ಲಿನ ಸಂತೋಷ್ ಥಿಯೇಟರ್ ಗೆ ಕಾಂತಾರ ಸಿನಿಮಾ ನೋಡಲು ಬಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿ ಥಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಹಲ್ಲೆಗೊಳಗಾದ ಬಂಟ್ವಾಳದ ಮೊಹಮ್ಮದ್ ಇಮ್ತಿಯಾಜ್ ದೂರು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತಳಾದ ತನ್ನದೇ ಕೋಮಿನ ಯುವತಿಯ ಭೇಟಿಗೆಂದು ಸುಳ್ಯಕ್ಕೆ ಯುವಕ ಬಂದಿದ್ದು, ಈ ವೇಳೆ ಇಬ್ಬರೂ ನಗರದ ಸಂತೋಷ್ ಚಿತ್ರಮಂದಿರಕ್ಕೆ ‘ಕಾಂತಾರ’ ಸಿನಿಮಾ ನೋಡಲು ನಿರ್ಧರಿಸಿ ಹೋಗಿದ್ದರು.
ಆದರೆ ಸಿನಿಮಾ ಆರಂಭಕ್ಕೆ ಸಮಯವಿದ್ದ ಕಾರಣ ಅದರ ಆವರಣದಲ್ಲಿ ಮಾತನಾಡುತ್ತಿದ್ದ ವೇಳೆ ಮುಸ್ಲಿಂ ಯುವಕರ ಗುಂಪೊಂದು ಸ್ಥಳಕ್ಕೆ ಧಾವಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧವಾಗಿ ಸುಳ್ಯ ಠಾಣೆಯಲ್ಲಿ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬಿರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.