ಮಂಗಳೂರು : ಮೇ 27 ರಂದು ಮಂಗಳೂರು ಹೊರವಲಯದ ಅಡ್ಯಾರು ಬಳಿ ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ.
ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿ, ವಾಹನ ಹತ್ತಿಸಲು ಯತ್ನಿಸಿದ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲ್ಪಟ್ಟಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆ ಎಎಸ್ಐ ಬಿ.ಚಂದ್ರಶೇಖರ ಅವರು ದೂರು ಸಲ್ಲಿಸಿದ್ದು, ಕೆಟಿಎಂ ಬೈಕ್ ಮತ್ತು ಸ್ಕೂಟರ್ ಸವಾರರಿಬ್ಬರು, ಕಾರು ಚಾಲಕ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ.
ಪೊಲೀಸರನ್ನು ನಿಂದಿಸಿದವರ ಬಳಿ ಎಸ್ ಡಿಪಿಐ ಪಕ್ಷದ ಧ್ವಜವಿತ್ತೆನ್ನಲಾಗಿದ್ದು, ನಿಂದನೆ ವಿಡಿಯೋ ವೈರಲ್ ಆಗಿದೆ.
ಕಣ್ಣೂರಿನಲ್ಲಿ ಎಸ್ ಡಿಪಿಐ ಪಕ್ಷ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ವೇಳೆ ಬಂದೋಬಸ್ತ್ ನಲ್ಲಿದ್ದ ಸಿಬ್ಬಂದಿಗಳಿಗೆ ಪಡೀಲ್ ಕಡೆಯಿಂದ ಬಂದ ವಾಹನ ಸವಾರರು ಬ್ಯಾರಿ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸುತ್ತಾ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಸಂಗನ ಗೌಡ ಅವರ ಮೇಲೆ ವಾಹನ ಹಾಯಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಆ ವೇಳೆ ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ಸಂಗನಗೌಡ ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.