ಕೇರಳದ ಕಣ್ಣೂರಿನಿಂದ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ಯುವಕನಿಗೆ ಹೃದಯಾಘಾತವಾಗಿದ್ದು, ತಕ್ಷಣ ಎಚ್ಚೆತ್ತ ಸಹ ಪ್ರಯಾಣಿಕೆ ನರ್ಸ್ ಓರ್ವರು ಯುವಕನ ಪ್ರಾಣ ರಕ್ಷಿಸಿದ ಘಟನೆ ನಡೆದಿದೆ.
ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ನಿಲಂಬುರ್ ನ 32 ವರ್ಷದ ಯುವಕ ಸುಮನ್ ಗೆ ಹೃದಯಾಘಾತವಾಗಿದೆ. ಕೂಡಲೆ ಸಿಪಿಆರ್ ನೀಡಿ ಜೀವ ಉಳಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೀತಾ ಕಣ್ಣೂರಿನಿಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ನರ್ಸ್ಗಳಿಗಾಗಿ ಕೊಡುವ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ವಿಜೇತರನ್ನು ಗೌರವಿಸುವ ಸಮಾರಂಭದಲ್ಲಿ ಭಾಗವಹಿಸಲು ಗೀತಾ ಪಿ ಅವರು ಕೇರಳ ರಾಜ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳುತ್ತಿದ್ದರು.
ಸುಮನ್ ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಗ ವಿಮಾನದಲ್ಲಿ ಯಾರಾದರೂ ವೈದ್ಯಕೀಯ ಪ್ರಯಾಣಿಕರಿದ್ದೀರಾ ಎಂದು ವಿಚಾರಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಕೋಝಿಕೋಡ್ ವೈದ್ಯಕೀಯ ಕಾಲೇಜಿನ ಮಾಜಿ ನರ್ಸಿಂಗ್ ಸೂಪರಿಟೆಂಡೆಂಟ್ ಪಿ. ಗೀತಾ, ಸಿಪಿಆರ್ ನೀಡಿ ಪ್ರಾಣ ರಕ್ಷಿಸಿದ್ದಾರೆ.