ಚಿತ್ರದುರ್ಗ: ಪಠ್ಯ ಪರಿಷ್ಕರಣೆಯಲ್ಲಿ ಏನಾದರೂ ವ್ಯತ್ಯಾಸವಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವಾಂಶದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದೇವರಕೊಟ್ಟ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಸಿಎಂ, ನಮ್ಮದು ಬಸವ ಪಥದ ಸರ್ಕಾರ ಎಂದು ತಿಳಿಸಿದ್ದಾರೆ.
ಪಠ್ಯಪುಸ್ತಕ ಸಮಿತಿಯ ಕೆಲಸ ಪೂರ್ಣಗೊಂಡಿದ್ದರಿಂದ ಸಮಿತಿಯನ್ನು ವಿಸರ್ಜನೆ ಗೊಳಿಸಲಾಗಿದೆ. ಪರಿಷ್ಕೃತ ಪಠ್ಯದ ಬಗ್ಗೆ ಹಲವಾರು ಸ್ವಾಮೀಜಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಬಸವಣ್ಣನವರ ಉತ್ತಮ ವಚನಗಳಿದ್ದು, ಅವುಗಳನ್ನು ಪರಿಶೀಲಿಸಿದ್ದೇನೆ. 2015 ರಲ್ಲಿ ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದ ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಈಗಿನ ಸಮಿತಿಗೆ ಕೇವಲ ಒಂದು ವಾಕ್ಯದ ವ್ಯತ್ಯಾಸವಿದ್ದು, ಉಳಿದಂತೆ ಲಿಂಗದೀಕ್ಷೆ ಸೇರಿದಂತೆ ಎಲ್ಲ ವಿಷಯಗಳು ಬರಗೂರು ರಾಮಚಂದ್ರಪ್ಪ ಅವರ ಪಠ್ಯದಲ್ಲಿಯೂ ಇದೆ ಎಂದು ಸಿಎಂ ತಿಳಿಸಿದ್ದಾರೆ.
ಒಟ್ಟಾರೆ ಬಸವಣ್ಣನವರ ನಿಜ ಸ್ವರೂಪ ಹಾಗೂ ವಚನ ಸಾಹಿತ್ಯ ಪರಿಚಯ ಆಗಬೇಕು ಎಂಬುದು ನಮ್ಮೆಲ್ಲರ ಇಚ್ಛೆ. ಅದಕ್ಕಾಗಿ ಎಲ್ಲರ ಜತೆ ಸಮಾಲೋಚನೆ ಮಾಡುತ್ತೇವೆ ಎಂದು ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ,
ಹೆಡಗೇವಾರ್ ಅವರ ಪಠ್ಯವೂ ಇರಲಿದೆ. ಪರಿಷ್ಕೃತ ಪಠ್ಯಗಳಿಗೆ ಹೊಸ ಸಂಪುಟವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.