ಬೆಂಗಳೂರು – ತಮ್ಮ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿರುವ ಅತೃಪ್ತ ಶಾಸಕರ ಜತೆ ಯಾವುದೇ ರೀತಿಯ ಮಾತುಕತೆ ಹಾಗೂ ಸಂಧಾನಕ್ಕೆ ಜಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಠಿಣ ಸಂದೇಶ ರವಾನಿಸಿದ್ದಾರೆ.
ಹೈಕಮಾಂಡ್ ಬೆಂಬಲ ಗಿಟ್ಟಿಸಿಕೊಂಡಿರುವ ಯಡಿಯೂರುಪ್ಪ ಅವರು, ಸದ್ಯ ರಾಜ್ಯದಲ್ಲಿ ಎದುರಾಗಿರುವ ಕೊರನಾ ನಿಯಂತ್ರಣ ಹಾಗೂ ಆಡಳಿತ ಚುರುಕಿಗೆ ಗಮನ ಹರಿಸಲು ಮುಂದಾಗಿದ್ದು, ಅತೃಪ್ತರ ಜತೆ ಮಾತುಕತೆ ಮುಗಿದ ಅಧ್ಯಯ ಎಂದು ಹೇಳಿದ್ದಾರೆ.
ಈಗಿನ ಲೆಕ್ಕಾಚಾರದಲ್ಲಿ ತಮ್ಮ ವಿರುದ್ಧ ಭಿನ್ನಮತ ಸಾರಿದರೆ ವರಿಷ್ಠರ ಬೆಂಬಲ ಅತೃಪ್ತರಿಗೆ ಸಿಗುವುದಿಲ್ಲ. ಒಂದು ಬಾರಿ ಸಂಧಾನಕ್ಕೆ ಬಗ್ಗಿದರೆ ಪುನಃ ಪುನಃ ಇದೇ ರೀತಿಯ ಬ್ಲಾಕ್ಮೇಲ್ ತಂತ್ರ ಅನುಸರಿಸುತ್ತಾರೆ ಎಂಬ ಕಾರಣಕ್ಕಾಗಿ ಬಿಎಸ್ವೈ ಕೂಡ ಸೊಪ್ಪು ಹಾಕಲು ಹಿಂದೇಟು ಹಾಕಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ಬೆಳ್ಳಂಬೆಳಗ್ಗೆ ತಮ್ಮ ಟ್ವಿಟರ್ನಲ್ಲಿ ನಾನು ಯಾವುದೇ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸುವುದಿಲ್ಲ. ಅದರ ಅಗತ್ಯವೂ ಇಲ್ಲ ಎನ್ನುವ ಮೂಲ ಸಂಧಾನ ಬಾಗಿಲು ಮುಚ್ಚಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಎಂದಿನಂತೆ ತಮ್ಮ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.