ತುಮಕೂರು: ಒಂದೇ ಗ್ರಾಮದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ. ಆಟವಾಡಲು ಹೋಗಿದ್ದ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮೀ ಹಾಗೂ ಭಾನು ಎಂಬುವರು ಶನಿವಾರ ಮಧ್ಯಾಹ್ನ ಆಟವಾಡು ಮನೆಯಿಂದ ತೆರಳಿದ್ದರು. ಸಂಜೆಯಾದರೂ ಮನೆಗೆ ಮಕ್ಕಳು ಬಾರದೇ ಇದ್ದದ್ದರಿಂದ ಗ್ರಾಮದಲ್ಲಿ ಮಕ್ಕಳಿಗಾಗಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಪಟ್ಟನಾಯಕನಹಳ್ಳಿ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವಂತ ಪೊಲೀಸರು ಮಕ್ಕಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
ಈ ಮಾಹಿತಿಯನ್ನು ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ ಕೂಡ ಹಂಚಿಕೊಂಡಿದ್ದು ದಿನಾಂಕ 20-05-2023ರಂದು ಶನಿವಾರ ಚಿಕ್ಕಬಾಣಗೆರೆ ಗ್ರಾಮದಿಂದ ಸಾಯಂಕಾಲ 3.30 ರಿಂದ 4 ಗಂಟೆಯ ಸಮಯದಲ್ಲಿ ಆಟವಾಡಲು ಹೋದಂತ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.
10ನೇ ತರಗತಿ ಓದುತ್ತಿದ್ದ ಮಹಾಲಕ್ಷ್ಮೀ, 9ನೇ ತರಗತಿಯ ಭಾನು, ಮಂಜುಳಾ ಹಾಗೂ ಮನು ಕುಮಾರ್ ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳು ಕಂಡು ಬಂದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ಸಂಖ್ಯೆ 9480802954ಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.