ಪುತ್ತೂರು: ಚೆಕ್ ಅಮಾನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಸಂಸ್ಥೆಯಿಂದ ವಾಹನ ಖರೀದಿಸಲು ಹಸನಬ್ಬ ಮಂಗಳೂರು ಎಂಬವರು ಸಾಲ ಪಡೆದುಕೊಂಡಿದ್ದು ಸಾಲ ಮರುಪಾವತಿಗಾಗಿ ರೂ.5,75000ಕ್ಕೆ ಕರ್ಣಾಟಕ ಬ್ಯಾಂಕ್ನ ಚೆಕ್ ನೀಡಿದ್ದರು. ಸದ್ರಿ ಚೆಕ್ ಅಮಾನ್ಯಗೊಂಡಿದ್ದರಿಂದಾಗಿ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಸಂಸ್ಥೆಯು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಎಂ.ರಮೇಶ್ ರವರು ಆರೋಪಿ ಹಸನಬ್ಬರವರನ್ನು ದೋಷಿಯೆಂದು ತೀರ್ಪು ನೀಡಿ ರೂ.5,75,000ನ್ನು ದೂರುದಾರ ಸಂಸ್ಥೆಗೆ ಪಾವತಿಸುವಂತೆ ಮತ್ತು ತಪ್ಪಿದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದರು. ತೀರ್ಪಿಗೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲು ಆರೋಪಿಗೆ ಅವಕಾಶವಿದ್ದರೂ ಮೇಲ್ಮನವಿ ಮಾಡದೆ ತಲೆಮರೆಸಿಕೊಂಡಿದ್ದರು.
ಮೇಲ್ಮನವಿ ವಾಯಿದೆ ಮುಗಿದ ಹಿನ್ನಲೆಯಲ್ಲಿ ಪುತ್ತೂರು ಪೊಲೀಸರು ಆರೋಪಿಯನ್ನು ಫರಂಗಿಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.