ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಬೆಂಗಳೂರಿನ ಯಶವಂತಪುರ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಸ್ಥಾಪಿತಗೊಂಡಿರುವ ಸಿಸಿಟಿವಿ ಕಂಟ್ರೋಲಿಂಗ್ ಘಟಕವನ್ನು ಉದ್ಘಾಟಿಸಿದರು.
ದೂರ ಸಂವೇದಿ ವ್ಯವಸ್ಥೆಯಿಂದ ಸುಗಮ ಟ್ರಾಫಿಕ್ ನಿಯಂತ್ರಣದ ವ್ಯವಸ್ಥೆಯನ್ನು ವೀಕ್ಷಿಸಿದ ಗೃಹ ಸಚಿವರು, ಸ್ವತಃ ಟ್ರಾಫಿಕ್ ಸಂಚಾರಕ್ಕೆ ಅಡ್ಡಿಯಾಗಿದ್ದ ಆಟೋ ಚಾಲಕನನ್ನು ಎಚ್ಚರಿಸಿದರು.
ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಿಸಿಟಿವಿಗಳನ್ನು ಅಳವಡಿಸಿ ನಾಗರಿಕರ ಜತೆಗೆ ಸಂವಾದವನ್ನೂ ನಡೆಸಬಹುದಾದ ವ್ಯವಸ್ಥೆ ಇದಾಗಿದ್ದು ಬೆಂಗಳೂರು ನಗರದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ.
ಸಿಸಿಟಿವಿಗಳು ಹಗಲು ಹಾಗೂ ರಾತ್ರಿ ಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ಕಾರ್ಯಾಚರಿಸುತ್ತವೆ. ಸಂಶಯಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಬಗ್ಗೆ ವಿಶೇಷ ನಿಗಾ ಇಡಲು ಹೊಸ ವ್ಯವಸ್ಥೆ ಪೊಲೀಸರಿಗೆ ನೆರವಾಗಲಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.