ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ನಾಪತ್ತೆಯಾಗಿದ್ದಾರೆ. ಪ್ರಮುಖ ಆರೋಪಿಗಳ ಬಂಧನವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಅವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಆದಿತ್ಯ ಆಳ್ವ ಅವರ ಫಾರ್ಮ್ ಹೌಸ್ ಮ್ಯಾನೇಜರ್ ರಾಮದಾಸ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳದ ಬಳಿ ಇರುವ ಆದಿತ್ಯ ಆಳ್ವ ಅವರ ಹೌಸ್ ಆಫ್ ಲೈಫ್ ಮನೆ ಮೇಲೆ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ದಾಳಿವೇಳೆ ಎರಡು ಲ್ಯಾಪ್ಟಾಪ್, ಒಂದು ಕಂಪ್ಯೂಟರ್ ಹಾಗೂ ಸಿಸಿಟಿವಿ ಡಿವಿಆರ್ ಪತ್ತೆಯಾಗಿದ್ದು, ಅವೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದ್ದ ಆದಿತ್ಯ ಆಳ್ವ ಡ್ರಗ್ಸ್ ದಂಧೆಯ ಕಿಂಗ್ಪಿನ್ ವಿರೇನ್ ಖನ್ನಾ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ರವಿಶಂಕರ್ ಜೊತೆ ಸೇರಿ ಬೆಂಗಳೂರಿನಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆದಿತ್ಯ ಸ್ಯಾಂಡಲ್ವುಡ್, ಬಾಲಿವುಡ್ ನಟರ ನಂಟನ್ನೂ ಹೊಂದಿದ್ದರು.
ಬಾಲಿವುಡ್ ಖ್ಯಾತ ನಟ ವಿವೇಕ್ ಒಬೆರಾಯ್ ಅವರ ಹೆಂಡತಿಯ ಸೋದರನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ 6ನೇ ಆರೋಪಿಯಾಗಿದ್ದಾರೆ. ಆದಿತ್ಯ ಆಳ್ವಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರೂ. ಆತ ಪತ್ತೆಯಾಗಿರಲಿಲ್ಲ.