ಮಂಗಳೂರು : ಮನೆಯೊಂದಕ್ಕೆ ನುಗ್ಗಿದ ಕಳ್ಳರು ಜಾಲಾಡಿ ಏನೂ ಸಿಗದಿದ್ದಾಗ ಅಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಇಲ್ಲಿನ ಮುಕ್ಕಚ್ಚೇರಿ ನಿವಾಸಿ ಅಬೂಸಾಲಿ ಎಂಬವರು ಪುತ್ರರೊಂದಿಗೆ ವಿದೇಶದಲ್ಲಿದ್ದು ಮನೆಯನ್ನು ಕಾರು ಚಾಲಕ ಆತೂರು ನಿವಾಸಿ ಹನೀಫ್ ಎಂಬವರು ನೋಡಿಕೊಳ್ಳುತ್ತಿದ್ದರು. ಬಕ್ರೀದ್ ನಿಮಿತ್ತ ಹನೀಫ್ ಎರಡು ದಿನಗಳ ಹಿಂದೆ ಮನೆಗೆ ಬೀಗ ಜಡಿದು ಊರಿಗೆ ತೆರಳಿದ್ದರು. ಇಂದು ಬೆಳಗ್ಗೆ ಹನೀಫ್ ಮುಕ್ಕಚ್ಚೇರಿ ಮನೆಗೆ ಬಂದು ನೋಡಿದಾಗ ಮನೆಯ ಗೇಟ್ ತೆರೆದಿತ್ತಲ್ಲದೆ, ಶೆಡ್ ನಲ್ಲಿ ನಿಲ್ಲಿಸಿದ್ದ ಒಂದು ಎರ್ಟಿಗಾ ಕಾರು ನಾಪತ್ತೆಯಾಗಿತ್ತು ಎನ್ನಲಾಗಿದೆ. ಬಳಿಕ ಮನೆಯೊಳಗೆ ಪರಿಶೀಲಿಸಿದಾಗ ಮನೆಗೂ ಕಳ್ಳರು ನುಗ್ಗಿರುವುದು ಬೆಳಕಿಗೆ ಬಂದಿದ್ದು, ಅವರು ಉಳ್ಳಾಲ ಪೊಲೀಸರಿ ಮಾಹಿತಿ ನೀಡಿದ್ದಾರೆ.
ಮನೆಯ ಮೊದಲ ಮಹಡಿಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕೋಣೆಯಲ್ಲಿದ್ದ ಕಪಾಟುಗಳನ್ನೆಲ್ಲಾ ಜಾಲಾಡಿದ್ದಾರೆ. ಈ ವೇಳೆ ಏನು ಸಿಗದಿರುವುದರಿಂದ ಕಪಾಟಿನ ಬದಿಯಲ್ಲಿಟ್ಟಿದ್ದ ಕಾರಿನ ಕೀಯನ್ನು ಬಳಸಿ ಎರ್ಟಿಗಾ ಕಾರನ್ನು ಕದ್ದೊಯ್ದಿದ್ದಾರೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಹಾಗೂ ಪೊಲೀಸರ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.