ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ಯಾರಿಗೆ ಯಾವ ಖಾತೆ ಎಂಬುದು ಪಟ್ಟಿ ನಾಳೆ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಜ.13ರಂದು ನಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆಯಲ್ಲಿ ‘ಸಪ್ತ’ ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ. ಉನ್ನತ ಮೂಲಗಳ ಪ್ರಕಾರ ನಾಳೆ(ಬುಧವಾರ) ಯಾರಿಗೆ, ಯಾವ ಖಾತೆ ಸಿಗಲಿದೆ ಎಂಬುದರ ಪಟ್ಟಿ ಇಲ್ಲಿದೆ.
ಉಮೇಶ್ ಕತ್ತಿ – ಅಬಕಾರಿ ಇಲಾಖೆ
ಎಂಟಿಬಿ ನಾಗರಾಜ್ – ಇಂಧನ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಅರವಿಂದ ಲಿಂಬಾವಳಿ – ಉನ್ನತ ಶಿಕ್ಷಣ ಅಥವಾ ಬೆಂಗಳೂರು ಅಭಿವೃದ್ಧಿ
ಮರುಗೇಶ ನಿರಾಣಿ – ಸಣ್ಣ ಕೈಗಾರಿಕೆ ಇಲಾಖೆ
ಆರ್. ಶಂಕರ್ – ಪ್ರವಾಸೋದ್ಯಮ ಇಲಾಖೆ
ಎಸ್. ಅಂಗಾರ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬಂದರು ಮತ್ತು ಒಳನಾಡು
ಸಿ.ಪಿ.ಯೋಗೇಶ್ವರ್ – ಯುವಜನಾ ಸೇವೆ ಮತ್ತು ಕ್ರೀಡೆ, ರೇಷ್ಮೆ ಇಲಾಖೆ
ಬೆಂಗಳೂರು ಅಭಿವೃದ್ಧಿ ಜವಾಬ್ದಾರಿಗಾಗಿ ಅರವಿಂದ ಲಿಂಬಾವಳಿ ಪಟ್ಟು ಹಿಡಿದಿದ್ದಾರೆ. ಆದರೆ ಮೂಲಗಳ ಪ್ರಕಾರ ಬೆಂಗಳೂರು ಅಭಿವೃದ್ಧಿ ಯಾರಿಗೂ ನೀಡದೆ ಸಿಎಂ ಬಳಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಎಂಟಿಬಿ ನಾಗರಾಜ್ ಅವರು ವಸತಿ ಖಾತೆ ಬೇಕೆಂದು ಕೇಳುತ್ತಿದ್ದಾರೆ. ಇಂಧನ ಖಾತೆಗೆ ಉಮೇಶ್ ಕತ್ತಿ ಬೇಡಿಕೆಯಿಟ್ಟಿದ್ದಾರೆ.
ಇನ್ನು ಖಾತೆ ಹಂಚಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಂತ್ರಿ ಮಾಡೋದು, ಖಾತೆ ಹಂಚುವುದು ಸಿಎಂ ಪರಮಾಧಿಕಾರ. ಇದರ ಬಗ್ಗೆ ಸಿಎಂ ಅವರೇ ಅಂತಿಮ ನಿರ್ಧಾರ ತಗೋಬೇಕು ಎಂದಿದ್ದಾರೆ.