ಬೆಂಗಳೂರು : ರಾಜ್ಯದ ಮತದಾರರ ತೀರ್ಪನ್ನು ಗೌರವಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ, ಸಂಘಟನೆಯಲ್ಲಿ ಲೋಪಗಳಿದ್ರೆ ಚರ್ಚಿಸಿ ಸರಿಪಡಿಸಿಕೊಳ್ಳುತ್ತೇವೆ.ಹಿಂದುತ್ವದ ವಿಷಯದಲ್ಲಿ ಕೆಲ ಕಡೆ ಅಟಾಟೋಪ ಮೆರೆದಿದ್ದಾರೆ. ಹಿಂದುತ್ವದ ವಿಷಯದಲ್ಲಿ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ.ಮತದಾರರ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿಗರ ರೀತಿ ಗೆದ್ದಾಗ ಪ್ರಜಾಪ್ರಭುತ್ವದ ತೀರ್ಪು ಅನ್ನೋದು, ಸೋತಾಗ ಇವಿಎಂ ಮೇಲೆ ದೂರುವ ಕೆಲಸ ಮಾಡುವುದಿಲ್ಲ.ಜನರು ನೀಡಿದ ತೀರ್ಪನ್ನು ಗೌರವಿಸುತ್ತೇನೆ, ಸ್ವಾಗತ ಮಾಡುತ್ತೇನೆ.ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಲಿ, ರಾಜ್ಯವನ್ನು ಅಭಿವೃದ್ಧಿ ಕಡೆ ಕಾಂಗ್ರೆಸ್ ತೆಗೆದುಕೊಂಡು ಹೋಗಲಿ ಎಂದರು.
ನಾವು ಈ ಸೋಲಿನ ಬಗ್ಗೆ ಅವಲೋಕನ ಮಾಡಿಕೊಳ್ಳುತ್ತೇವೆ. ಸಿದ್ದಾಂತದ ಕಾರಣಕ್ಕೆ ನಾವು ಬಿಜೆಪಿಗೆ ಬಂದಿರುವುದು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ. ಚುನಾವಣೆಯಲ್ಲಿ ನನ್ನ ಸೋಲಿಗೆ ಹಲವು ಕಾರಣಗಳಿವೆ. ನನ್ನನ್ನು ಸೋಲಿಸುವ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡಿತ್ತು ಎಂದು ಹೇಳಿದ್ದಾರೆ.