ಉಡುಪಿ: ಮದುವೆಯಾದ ಬಳಿಕ ನವ ದಂಪತಿ ಮಧುಚಂದ್ರದ ಯೋಜನೆ ರೂಪಿಸುವುದು ಸಾಮಾನ್ಯ. ಆದರೆ, ಬೈಂದೂರು ತಾಲ್ಲೂಕಿನ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ದಂಪತಿ ಮಾತ್ರ ಹುಟ್ಟೂರಿನ ಕಡಲತೀರ ಸ್ವಚ್ಛಗೊಳಿಸಿಯೇ ಮಧುಚಂದ್ರಕ್ಕೆ ಹೋಗುವ ಪಣ ತೊಟ್ಟರು. ಸತತ 9 ದಿನಗಳ ಪರಿಶ್ರಮದ ಫಲವಾಗಿ ಸೋಮೇಶ್ವರ ಬೀಚ್ನ ಒಂದು ಭಾಗ ಕಸಮುಕ್ತವಾಗಿದೆ. ಸಂಕಲ್ಪ ಈಡೇರಿದ ನಂತರ ದಂಪತಿ ಮಧುಚಂದ್ರಕ್ಕೆ ಹೋಗುವ ತಯಾರಿ ನಡೆಸಿದ್ದಾರೆ.
ಬೈಂದೂರು ತಾಲೂಕಿನ ಕಳವಾಡಿಯ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ನವೆಂಬರ್ 18 ನೇ ತಾರೀಖಿನಂದು ಹಸೆಮಣೆ ಏರಿದ ಅನುದೀಪ್ ಹೆಗಡೆ ಮತ್ತು ಮಿನುಷ ಕಾಂಚನ ದಂಪತಿ ಸೋಮೇಶ್ವರದ ಬೀಚ್ನಲ್ಲಿ ಲೋಡ್ ಗಟ್ಟಲೆ ಕಸ ಹೊರ ತೆಗೆದಿದ್ದಾರೆ. ತಮ್ಮ ಹನಿಮೂನ್ ಪ್ಲಾನನ್ನು ಮುಂದೂಡಿದ ಈ ದಂಪತಿ 7 ದಿನದ ಅವಧಿಯಲ್ಲಿ ಬರೋಬ್ಬರಿ 700 ಕೆಜಿ ಕಸ ಮತ್ತು 500 ಕೆಜಿ ಪ್ಲಾಸ್ಟಿಕ್ ವಿಲೇವಾರಿ ಮಾಡಿದ್ದಾರೆ.
ಬೀಚ್ ನಲ್ಲಿ 7 ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುವುದರ ಜೊತೆಗೆ ಯುವಜನತೆಗೆ ಒಳ್ಳೆಯ ಸಂದೇಶವನ್ನೂ ರವಾನಿಸಿದ್ದಾರೆ. ಪ್ರತಿದಿನ 2 ಗಂಟೆ ಶ್ರಮದಾನ ಮಾಡಿ ಈ ದಂಪತಿಗಳು ಬೀಚ್ ಸ್ವಚ್ಛತೆಯಲ್ಲಿ ತೊಡಗಿರುವುದನ್ನು ಗಮನಿಸಿದ ಸ್ಥಳೀಯ ಸಂಘಟನೆಗಳು ನಾವು ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ.