ಮಂಗಳೂರು: ಇಲ್ಲಿನ ಪಡೀಲ್ ಸಮೀಪ ವ್ಯಾನ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಚಿಕ್ಕಮಗಳೂರು ಮೂಲದ ಸುಮಂತ್ (21) ಮೃತ ಬೈಕ್ ಸವಾರ. ಅಪಘಾತದಲ್ಲಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ಹಾಗೂ ಹಾಸನದ ಮೂಲದ ಕೆಲವು ಸ್ನೇಹಿತರು ಮೂರು ಬೈಕ್ಗಳಲ್ಲಿ ಕರಾವಳಿ ಪ್ರವಾಸ ಕೈಗೊಂಡಿದ್ದರು. ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಕಡಲ ತೀರಗಳಿಗೆ ಭೇಟಿ ನೀಡಿದ್ದರು. ಊರಿಗೆ ವಾಪಸಾಗುವ ಸಂದರ್ಭ ಪಡೀಲ್ ಸಮೀಪದಲ್ಲಿ ಒಮಿನಿ ಮಾದರಿಯ ವ್ಯಾನ್ಗೆ ಸುಮಂತ್ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.