ಸುರತ್ಕಲ್: ಕುಡಿಯೋದಕ್ಕೆ ಒಂದು ಗ್ಲಾಸ್ ನೀರು ಕೇಳಿದ್ರೆ ಇವತ್ತು ಕೊಡೊದಕ್ಕೆ ಹಿಂದೆ ಮುಂದೆ ನೋಡ್ತಾರೆ. ಅಂತಹದ್ರಲ್ಲಿ ತನ್ನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಜೀವ ಉಳಿಸಲು ನಿರ್ವಾಹಕನೋರ್ವ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಲು ಸ್ವತಃ ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.
‘ಶಾನ್’ ಸರ್ವೀಸ್ ಬಸ್ ನ ನಿರ್ವಾಹಕ ಗಣೇಶ್ ಅವರೇ ಮಾನವೀಯತೆ ಮೆರೆದ ಬಸ್ ನಿರ್ವಾಹಕ. ನವೆಂಬರ್ 16 ರಂದು ಬೆಳಗ್ಗೆ ಎಂದಿನಂತೆ ಗಣೇಶ್ ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾಣ್ (40) ಎಂಬವರು ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಬಸ್ ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ಬರುವಾಗ ರಾಜೇಶ್ ಚೌಹಾಣ್ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಗಣೇಶ್ ಅವರು ಟಿಕೆಟ್ ಕಲೆಕ್ಷನ್ ಕೆಲಸವನ್ನು ಚಾಲಕ ರಮೇಶ್ ಅವರಿಗೆ ವಹಿಸಿ ಅಸ್ವಸ್ಥಗೊಂಡ ಪ್ರಯಾಣಿಕನನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಆದರೆ ಆರೋಗ್ಯ ಸ್ಥಿತಿ ಕೈ ಮೀರಿದ್ದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ತಕ್ಷಣ ಆಂಬುಲೆನ್ಸ್ ನಲ್ಲಿ ತಾವೇ ವೆಚ್ಚ ಭರಿಸಿ ವೆನ್ ಲಾಕ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಜೇಶ್ ಚೌಹಾಣ್ ಮೃತಪಟ್ಟಿದ್ದರು. ಬಳಿಕ ಘಟನೆ ಕುರಿತು ಸುರತ್ಕಲ್ ಪೊಲೀಸರಿಗೆ ಗಣೇಶ್ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಇನ್ನು ಸುರತ್ಕಲ್ ಪೊಲೀಸ್ ಸಿ ಐ ಚಂದ್ರಪ್ಪ ಹಾಗೂ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಗಣೇಶ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ