ಬಾಗಲಕೋಟೆ; ಸಾಮಾನ್ಯವಾಗಿ ಎತ್ತೊಂದರ ಬೆಲೆ ಎಷ್ಟಿರಬಹುದು ಹೇಳಿ. ಹೆಚ್ಚು ಅಂದರೆ ಒಂದರಿಂದ ಎರಡು ಲಕ್ಷ. ಆದರೆ ಇಲ್ಲೊಂದು ಎತ್ತು ನೀವು ಊಹಿಸಿದ ಮೊತ್ತಕ್ಕೆ ಸೇಲ್ ಆಗಿದೆ. ಎಷ್ಟು ಅಂತೀರಾ ಒಂದ್ಲಲ ಎರಡಲ್ಲ ಬರೋಬ್ಬರಿ 12 ಲಕ್ಷ ರೂಪಾಯಿಗೆ ಈ ಎತ್ತು ಸೇಲ್ ಆಗಿದೆ.
ಹೌದು ಬಾಗಲಕೋಟೆ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದ ಸಿದ್ದು ಪೂಜಾರಿ ಎಂಬುವರ ಎತ್ತು ಇಂಥದೊಂದು ಬೃಹತ್ ಮೊತ್ತಕ್ಕೆ ಮಾರಾಟವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಚಿಂಚ ಎಂದೇ ಹೆಸರುವಾಸಿ ಆಗಿರುವಂತಹ ಎತ್ತು ಇಡೀ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದೆ. ಚಿಂಚ ಎತ್ತು ಅಂದ್ರೆ ಯಾವುದೇ ತೆರೆಬಂಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಫಿಕ್ಸ್. ಬಾಗಲಕೋಟೆ ವಿಜಯಪುರ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ನೂರಾರು ಸ್ಪರ್ಧೆಯಲ್ಲಿ ಭಾಗವಹಿಸಿದ ಈ ಎತ್ತು ಅನೇಕ ಬಹುಮಾನಗಳನ್ನು ತನ್ನ ಕೊಂಬಿನಿಂದ ಬಾಚಿಕೊಂಡಿದೆ.
ಚಿಂಚ ಇದುವರೆಗೂ ತೆರೆಬಂಡಿ ಸ್ಪರ್ಧೆಯಲ್ಲಿ ಬರೊಬ್ಬರಿ 30 ಲಕ್ಷ ರೂಪಾಯಿ ನಗದು, 13 ತೊಲೆ ಬಂಗಾರ, ಎಂಟು ಬೈಕ್ ಗಳನ್ನು ಬಹುಮಾನವಾಗಿ ಗೆದ್ದಿದೆ. ಇದೀಗ ಈ ಎತ್ತನ್ನು ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮದ ಭೀಮಸಿ ಐನಾಪುರ 12 ಲಕ್ಷ 25 ಸಾವಿರ ರೂ ಕೊಟ್ಟು ಖರೀದಿಸಿದ್ದಾರೆ. ಆ ಮೂಲಕ ದಾಖಲೆ ಬೆಲೆಗೆ ಮಾರಾಟವಾದ ಎತ್ತು ಹೆಗ್ಗಳಿಕೆಗೆ ಚಿಂಚ ಪಾತ್ರವಾಗಿದೆ.