ಉಡುಪಿ: ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ವಾದ್ಯ ಸಂಗೀತರಾದ ಅಣ್ಣ ತಮ್ಮ ನಿಧನರಾದ ಹೃದಯವಿದ್ರಾವಕ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ನಾಗಸ್ವರ ವಾದನ ಹಾಗೂ ಸಾಕ್ಸೋಫೋನ್ ವಾದನದಲ್ಲಿ ಪ್ರತಿಭಾವಂತ ಕಲಾವಿದರಾಗಿದ್ದ ಸಹೋದರರಾದ ಗಣೇಶ್ ದೇವಾಡಿಗ (52) ಹಾಗೂ ರಾಘವೇಂದ್ರ ದೇವಾಡಿಗ (42) ಕೆಲವೇ ಗಂಟೆಗಳ ಅಂತರದಲ್ಲಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರರು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಘವೇಂದ್ರ ದೇವಾಡಿಗ ಗುರುವಾರ ಬೆಳಗ್ಗೆ ಮೃತಪಟ್ಟರೆ, ಸುದ್ದಿ ತಿಳಿದು ಕೆಲವೇ ಗಂಟೆಗಳ ಬಳಿಕ ಅಣ್ಣ ಗಣೇಶ ದೇವಾಡಿಗ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇಬ್ಬರೂ ಬ್ರಹ್ಮಾವರ ದೇವಾಡಿಗರಬೆಟ್ಟು ರಘುನಾಥ ದೇವಾಡಿಗ ಹಾಗೂ ಸುಮತಿ ದೇವಾಡಿಗ ಇವರ ಪುತ್ರರು. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಕೂಡ ವಾದ್ಯ ಸಂಗೀತದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದರು, ಗಣೇಶ್ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದರೆ, ರಾಘವೇಂದ್ರ ಪತ್ನಿಯನ್ನು ಅಗಲಿದ್ದಾರೆ. ಮನೆಯ ಮಕ್ಕಳಿಬ್ಬರನ್ನು ಒಂದೇ ದಿನ ಕಳೆದು ಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.