ಬೆಂಗಳೂರು; ಎಷ್ಟೋ ಕಳ್ಳತನ ಪ್ರಕರಣಗಳಲ್ಲಿ ಮನೆ ತುಂಬಾ ಜನ ಇದ್ರೂ ಕಳ್ಳರ ಮುಂದೆ ಮನೆ ಮಂದಿ ಅಸಹಾಯಕರಾಗಿರೋದನ್ನು ನೋಡಿದ್ದೇವೆ, ಆದರೆ ಬೆಂಗಳೂರಿನ ಈ ಮನೆ ಮಾಲೀಕನ ಧೈರ್ಯಕ್ಕೆ ನೀವು ಭೇಷ್ ಅನ್ನಲೇ ಬೇಕು..
ಬೆಂಗಳೂರಿನ ಅರಕೆರೆ ಬಳಿಯ ಮೈಕೋ ಲೇಔಟ್ ನಲ್ಲಿರುವ ಹರಿಪ್ರಸಾದ್ ಎಂಬವರ ಮನೆಗೆ ಬೆಳಗ್ಗಿನ ಜಾವ ಕಳ್ಳತನಕ್ಕೆ ದರೋಡೆಕೋರರ ಗ್ಯಾಂಗ್ ಒಂದು ಬಂದಿತ್ತು. ಈ ವೇಳೆ ಹರಿಪ್ರಸಾದ್ ಮನೆಯವರು ಅವರ ಅಕ್ಕನ ಮನೆಗೆ ತೆರಳಿದ್ದರು. ಹರಿಪ್ರಸಾದ್ ಮನೆಗೆ ಯಾರೋ ಬಂದಿದ್ದನ್ನು ನೋಡಿದ ಪಕ್ಕದ ಮನೆಯವರು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಹರಿಪ್ರಸಾದ್ ದ್ವಿಚಕ್ರ ವಾಹನದಲ್ಲಿ ಮನೆ ಬಳಿ ಬಂದಿದ್ದಾರೆ.
ಮನೆಗೆ ಬಂದು ನೋಡುವಾಗ ಕಳ್ಳರು ಎಲ್ಲಾ ದೋಚಿ ಎಸ್ಕೇಪ್ ಆಗೋಕೆ ರೆಡಿಯಾಗುತ್ತಿದ್ದರು. ಏನ್ ಮಾಡೋದು ಅಂತಾ ತೋಚದ ಹರಿಪ್ರಸಾದ್ ಅಲ್ಲೇ ಇದ್ದ ಕಲ್ಲುಗಳನ್ನು ದರೋಡೆಕೋರರ ಮೇಲೆ ಎಸೆದಿದ್ದಾರೆ, ಕಳ್ಳರು ಕೂಡ ಹರಿಪ್ರಸಾದ್ ಮೇಲೆ ಕಲ್ಲು ಎಸೆದಿದ್ದಾರೆ, ಆದರೂ ಹೆದರದ ಹರಿಪ್ರಸಾದ್ ಮತ್ತೆ ಅವರ ಮೇಲೆ ಕಲ್ಲು ಎಸೆದು ಅವರು ಕಾರಿನಲ್ಲಿ ಇಟ್ಟಿದ್ದ ನಗದು ಹಾಗು ಚಿನ್ನವನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಅಂತಾ ಎಸ್ಕೇಪ್ ಆಗಿದ್ದಾರೆ.
ಅಕ್ಟೋಬರ್ 4 ರ ಬೆಳ್ಳಂಬೆಳಗ್ಗೆ 5 ಗಂಟೆಗೆ ಈ ಘಟನೆ ನಡೆದಿದ್ದು, ಘಟನೆಯ ಎಲ್ಲಾ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಸ್ಥಳಕ್ಕೆ ಪುಟ್ಟೇನಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಸಾದ್ ಚಿಕಿತ್ಸೆ ಪಡೆಯುತ್ತಿದ್ದು, ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.