ಕಾಸರಗೋಡು: ಇಲ್ಲಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾ. 27ರಿಂದ ಎ. 7ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಐತಿಹಾಸಿಕ ಮೂಡಪ್ಪ ಸೇವೆಯೂ ಜರಗಲಿದ್ದು, ಅಪ್ಪ ತಯಾರಿಸಲು ಬೇಕಾದ ಅಕ್ಕಿಯನ್ನು ದೇಗುಲದ ಸಮೀಪದ ಏರಿಕ್ಕಳದಲ್ಲಿ ದೇವಸ್ಥಾನದ ವತಿಯಿಂದಲೇ ಸಾವಯವ ರೀತಿಯಲ್ಲಿ ಬೆಳೆಯಲಾಗಿದ್ದು, ಇದೀಗ ಈ ಅಕ್ಕಿಯನ್ನು ದೇವಸ್ಥಾನದಲ್ಲಿ ಮುಡಿ ಕಟ್ಟಲಾಗುತ್ತಿದೆ.
ಮಧೂರು ಗಣಪತಿ ಕ್ಷೇತ್ರವು ಮೂಡಪ್ಪ ಸೇವೆಯೇ ವಿಶೇಷವಾಗಿದ್ದು, ಶ್ರೀ ಮಹಾಗಣಪತಿಯ ಗರ್ಭಗೃಹದೊಳಗೆ ಕಬ್ಬಿನ ಬೇಲಿಯನ್ನು ರಚಿಸಿ ಅದರೊಳಗೆ ಹದಿನಾರು ಮುಡಿ ಅಕ್ಕಿಯ ಅಪ್ಪ ವನ್ನೂ, ಒಂದು ಮುಡಿ ಅಕ್ಕಿಯ ಪಚ್ಚಪ್ಪವನ್ನೂ, 108 ತೆಂಗಿನ ಕಾಯಿಗಳ ಅಷ್ಟದ್ರವ್ಯವನ್ನೂ ತುಂಬಲಾಗುತ್ತದೆ. ಮೂಡಪ್ಪ ಸೇವೆಗೆ 16 ಅಕ್ಕಿ ಮುಡಿ ಬೇಕಾಗಿದ್ದು, ಒಂದೊಂದು ಮುಡಿಯಲ್ಲಿ 36 ಕಿಲೋ ಬೆಳ್ತಿಗೆ ಅಕ್ಕಿಯನ್ನು ತುಂಬಿ ಮುಡಿಯನ್ನು ಕಟ್ಟಲಾಗುತ್ತದೆ. ನಡು ನಡುವೆ ಜೇನು, ಕಲ್ಲು ಸಕ್ಕರೆ, ತುಪ್ಪಗಳನ್ನೂ ಬಳಸಲಾತ್ತದೆ. ಇನ್ನು ಇವೆಲ್ಲವೂ ವಿಗ್ರಹದ ಜಿಹ್ವಾಗ್ರದ ವರೆಗೆ ಆವರಿಸಲಿದ್ದು, ಬಳಿಕ ಫಲಪುಷ್ಪ ಗಳಿಂದ ಅಲಂಕರಿಸಿ, ಪೂಜಿಸಿ ಪ್ರಾರ್ಥಿಸಿ ಕವಾಟ ಬಂಧನ ಮಾಡಲಾಗುತ್ತದೆ. ಮರುದಿನ ಪೂರ್ವಾಹ್ನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು ವೇದಘೋಷಗಳೊಂದಿಗೆ ಬಾಗಿಲು ತೆರೆಯಲಾಗುತ್ತದೆ. ನಂತರದಲ್ಲಿ ಅರ್ಪಣೆಯಾದ ಅಪೂಪಾದಿ ನೈವೇದ್ಯಗಳು ನೆರೆದ ಎಲ್ಲ ಭಕ್ತರಿಗೂ ವಿತರಿಸಲಾಗುತ್ತದೆ.
ಇನ್ನು ಬೆಳ್ತಿಗೆ ಅಕ್ಕಿ ಮುಡಿ ತಯಾರಿಸುವ ಕೆಲಸದಲ್ಲಿ ಮುಗುವಿನ ವೇಣುಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ ಬಾಲಕೃಷ್ಣ ರೈ ಮುಗು, ಶಿವಪ್ಪ ನಾಯ್ಕ ಮುಗು, ನಾರಾಯಣ ಸಿ.ಕೆ. ಬಾಡೂರು, ನಾರಾಯಣ ಅಮೆತ್ತೋಡು, ಚಂದ್ರ ಶೇಖರ್ ಮುಗು, ಗಣೇಶ್ ಕಿದೂರು, ಕೇಶವ ನಾಯ್ಕ ಮೊದಲಾದವರು ತೊಡಗಿಕೊಂಡಿದ್ದಾರೆ.