ಕೋಲಾರ: ಉಜಿರೆಯ 8 ವರ್ಷದ ಬಾಲಕ ಅನುಭವ ಅಪಹರಣ ಪ್ರಕರಣ ಸುಖ್ಯಾಂತ ಕಂಡಿದೆ. ಇಂದು ಬೆಳಗ್ಗಿನ ಜಾವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೂರ್ನಹೊಸಳ್ಳಿಯಲ್ಲಿ ಬಾಲಕನ್ನು ಪೊಲೀಸರು ರಕ್ಷಿಸಿದ್ದಾರೆ.
ಇನ್ನು ನಿನ್ನೆ ಕೂರ್ನಹೊಸಹಳ್ಳಿ ಗ್ರಾಮದ ಮಹೇಶ್ ನಿವಾಸಕ್ಕೆ 7 ಗಂಟೆ ವೇಳೆಗೆ ನಾಲ್ಕು ಮಂದಿ ಅಪಹರಣಕಾರರು ಬಾಲಕನೊಂದಿಗೆ ಆಗಮಿಸಿದ್ದರು. ನಾವು ಟ್ರಿಪ್ ಬಂದಿದ್ದೀವಿ ನಿಮ್ಮ ಮನೆಗೆ ಬರ್ತೀವಿ ಅಂತಾ ಮಹೇಶ್ ಅವರಿಗೆ ಮೊದಲೇ ಕಾಲ್ ಮಾಡಿ ಹೇಳಿದ್ದರು ಕಿಡ್ನ್ಯಾಪರ್ಸ್. ಅದರಂತೆ ಬಾಲಕನೊಂದಿಗೆ ಮನೆಗೆ ಬಂದ ಅಪಹರಣಕಾರರು ಮಹೇಶ್ ಮನೆಯಲ್ಲೇ ಊಟ ಮುಗಿಸಿದ್ದರು. ಅಲ್ಲದೇ ಅಲ್ಲಿಯೇ ತಂಗಿದ್ದರು. ಈ ವೇಳೆ ಗ್ರಾಮದ ಮಂಜುನಾಥ್ ಅವರ ಫೋನ್ ನನ್ನು ಅಪಹರಣಕಾರರು ಬಳಸಿದ್ದಾರೆ. ಮಂಜುನಾಥ್ ನಂಬರ್ ಗೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಅಪಹರಣಕಾರರ ಈ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರು ಮೊಬೈಲ್ ನೆಟ್ವರ್ಕ್ ಆಧರಿಸಿ ಬೆಳಗ್ಗೆ 4.45 ಕ್ಕೆ ಪೊಲೀಸರು ದಾಳಿ ನಡೆಸಿ ಕಿಡ್ನಾಪರ್ಸ್ ಬಂಧಿಸಿದ್ದಾರೆ. ಜೊತೆಗೆ ಅಪಹರಣಕಾರರಿಗೆ ಸಹಾಯ ಮಾಡಿದ ಆರೋಪದಡಿ ಮಹೇಶ್ ಹಾಗೂ ಮಂಜುನಾಥ್ ಅವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಗ್ರಾಮದ ಜನ ಮಾತ್ರ ಮಂಜುನಾಥ್ ಅವರದ್ದು ತಪ್ಪಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಅರಿವಿರಲಿಲ್ಲ ಎಂದಿದ್ದಾರೆ.
ಇನ್ನು ಮಹೇಶ್ ಪತ್ನಿ ಸುನೀತಾ ಕೂಡ ಇದೇ ರೀತಿ ಹೇಳಿದ್ದಾರೆ. ನನ್ನ ಪತಿಗೆ ಅಪಹರಣದ ಬಗ್ಗೆ ಮಾಹಿತಿ ಇಲ್ಲ. ಟ್ರಿಪ್ ಬಂದಿದ್ದೀವಿ, ನಿಮ್ಮ ಮನೆಗೆ ಬರ್ತೀವಿ ಅಂದ್ರು. ನನ್ನ ಗಂಡ ಬನ್ನಿ ಅಂದ್ರು. ನಾವು ಊಟ ನೀಡಿದೆವು. ಮಗು ಯಾರು ಎಂದು ಕೇಳಿದಾಗ ಅಪಹರಣಕಾರರಲ್ಲಿ ಒಬ್ಬನಾದ ಕೋಮಲ್ ನನ್ನ ಅಕ್ಕನ ಮಗ ಎಂದು ಹೇಳಿದ ಅಂತಾ ಮಹೇಶ್ ಪತ್ನಿ ಹೇಳಿದ್ದಾರೆ. ಅಲ್ಲದೇ ನನ್ನ ಪತಿ ನಿರಪರಾಧಿ ಎಂದಿದ್ದಾರೆ. ಆದರೆ ಇದೆಲ್ಲಾ ಎಷ್ಟರಮಟ್ಟಿಗೆ ನಿಜ ಅನ್ನೋದು ತಿನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ.