ಮುಂಬೈ, ಜೂನ್ 5: ಕೆಲದಿನಗಳಿಂದ ನಾಪತ್ತೆಯಾಗಿದ್ದ ಬಾರ್ ಆಂಡ್ ರೆಸ್ಟೋರೆಂಟ್ 2 ಸಿಬ್ಬಂದಿಗಳು ಇಂದು ರೆಸ್ಟೋರೆಂಟ್ ನ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುಂಬೈಯ ಮೀರಾ ರೋಡ್ ಸಮೀಪದ ಶೀತಲ್ ನಗರದಲ್ಲಿ ನಡೆದಿದೆ.
ಮ್ಯಾನೇಜರ್ ಹರೀಶ್ ಶೆಟ್ಟಿ(48), ವೈಟರ್ ನರೇಶ್ ಪಂಡಿತ್(52) ಮೃತರು.
ಲಾಕ್ ಡೌನ್ ನಿಂದಾಗಿ ಹೋಟೆಲ್ ಗಳು ಮುಚ್ಚಿದ್ದು, ಕೆಲ ಸಿಬ್ಬಂದಿಗಳು ಹೋಟೆಲ್ ನ ಕೊಠಡಿಯಲ್ಲೇ ಉಳಿದುಕೊಂಡಿದ್ದರು. ಈ ನಡುವೆ ಉಡುಪಿ ಮೂಲದ ಹರೀಶ್ ಶೆಟ್ಟಿ ಮತ್ತು ವೈಟರ್ ಕೆಲದಿನಗಳಿಂದ ನಾಪತ್ತೆಯಾಗಿದ್ದರು. ಹೋಟೆಲ್ ಮಾಲೀಕರು ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿತ್ತು. ಹುಡುಕಿದರೂ ಯಾವ ಪತ್ತೆಯೂ ಇರಲಿಲ್ಲ.
ಆದರೆ ಇಂದು ಹೋಟೆಲ್ ಮಾಲೀಕರಿಗೆ ಪುಣೆಯಿಂದ ಅನಾಮಧೇಯ ಕರೆ ಬಂದಿದ್ದು, ನಾಪತ್ತೆಯಾದ ಇಬ್ಬರನ್ನು ನಾನೇ ಕೊಂದಿದ್ದೇನೆ ಎಂದು ಹೇಳಿ ಫೋನ್ ಕಟ್ ಆಗಿದೆ. ನಂತರ ಫೋನ್ ಸ್ವಿಚ್ ಆಫ್ ಆಗಿದ್ದು, ನಂತರ ಫೋನ್ ಕರೆಯ ಆಧಾರದಲ್ಲಿ ಹುಡುಕಿದಾಗ ಇಬ್ಬರ ಶವ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳಿದ್ದವು.
ಅನಾಮಧೇಯ ಕರೆ ಮಾಡಿರುವ ವ್ಯಕ್ತಿ ಯಾರೆಂದು ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಎರಡು ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆಗೆ ಕಾರಣವೇನೆಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.