
ಬೆಂಗಳೂರು: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕರ ಪೋಸ್ಟ್ ಹಾಕಿರುವುದರ ವಿರುದ್ಧ ಕಾಂಗ್ರೆಸ್ ಸರ್ಕಾರ ಮೌನವಾಗಿರುವುದೇಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಕ್ಷೇಪಾರ್ಹ ಪೋಸ್ಟ್ ಮಾಡಿರುವ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಪರಿಶಿಷ್ಟ ಜಾತಿಯ ಸಮುದಾಯದಿಂದ ಬಂದ ಮಹಿಳಾ ಜನಪ್ರತಿನಿಧಿಯ ವ್ಯಕ್ತಿತ್ವಕ್ಕೆ, ಘನತೆಗೆ ಕುಂದು ತರುವಂತಹ ಪ್ರಕರಣ ನಡೆದಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೇ ಎಂದು ಕೇಳಿದ್ದಾರೆ.
ಗೃಹ ಇಲಾಖೆ ತಕ್ಷಣವೇ ಈ ಕೃತ್ಯದ ಹಿಂದಿರುವ ವಿಕೃತ ಮನಸ್ಸುಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಬಿ.ವೈ. ವಿಜಯೇಂದ್ರ, ಹುಬ್ಬಳ್ಳಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯ ಮೇಲೆ ಬಲಪ್ರಯೋಗ ಮಾಡಿ, ಬಂಧಿಸುವಲ್ಲಿ ತೋರಿದ ಅತಿವೇಗ, ಸುಳ್ಯ ಶಾಸಕರ ವಿರುದ್ಧ ವಿಕೃತ ಮನಸ್ಸುಗಳನ್ನು ಬಂಧಿಸುವಲ್ಲಿ ಗೃಹ ಇಲಾಖೆಗೆ ಏಕೆ ಇಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅಲ್ಲದೇ, ಮಹಿಳೆಯರ ಘನತೆಗಿಂತ ರಾಜಕೀಯ ದ್ವೇಷವೇ ಈ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯವಾಗಿರುವುದು ನಾಡಿನ ದುರ್ದೈವವಾಗಿದೆ ಎಂದು ಹೇಳಿರುವ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ದುರಾಡಳಿತ, ರಾಜಕೀಯ ದ್ವೇಷ, ಓಟ್ ಬ್ಯಾಂಕ್ ತುಷ್ಟೀಕರಣಗಳಿಂದ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗಿದ್ದು ತನ್ನ ಎಲ್ಲಾ ಕುಕೃತ್ಯಗಳಿಗೆ ಕಾಂಗ್ರೆಸ್ ಶೀಘ್ರವೇ ಬೆಲೆ ತೆರಲಿದೆ ಎಂದು ಎಚ್ಚರಿಸಿದ್ದಾರೆ.


