ಬೆಂಗಳೂರು: ಡ್ರಗ್ಸ್ ದಂಧೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೆ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದ ವಿಚಾರ ಚರ್ಚೆಗೆ ಬಂದಿದ್ದು, ಈ ಬಗ್ಗೆ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿ, ರಾಗಿಣಿಗೂ ನಮ್ಮ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಹಲವು ಚಿತ್ರನಟಿಯರಂತೆ ರಾಗಿಣಿ ಅವರು ಸ್ವಯಂಪ್ರೇರಿತರಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೂ ಪಕ್ಷಕ್ಕೂ ಬೇರೆ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ
ಮೇಲಾಗಿ ರಾಗಿಣಿ ದ್ವಿವೇದಿ ಪಕ್ಷದ ಕಾರ್ಯಕರ್ತರಲ್ಲ ಅಥವಾ ಆವರು ಸದಸ್ಯತ್ವ ಪಡೆದಿಲ್ಲ. ವಿಧಾನಸಭೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಪ್ರಚಾರ ನಡೆಸಿರಬಹುದುದು. ಆದರೆ ಪಕ್ಷ ಆಕೆಯನ್ನು ಪ್ರಚಾರಕ್ಕೆ ಕರೆದಿರಲಿಲ್ಲ.
ಕಾಂಪ್ರಮೈಸ್ ಮಾಡಿಕೊಂಡು ಅವರ ಜೊತೆ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ. ಯಾರೇ ಆದರೂ ಸರಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ರಾಗಿಣಿ ಬಿಜೆಪಿ ನಾಯಕರ ಜತೆ ತೆಗೆಸಿಕೊಂಡಿರುವ ಫೋಟೊಗಳು ಹರಿದಾಡುತ್ತಿರುವುದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಸಿಟಿ ರವಿಸ್ಪಷ್ಟನೆ ನೀಡಿದ್ದಾರೆ.