ಕಾರ್ಕಳ: ಅನ್ಯ ಜಿಲ್ಲೆ, ರಾಜ್ಯಗಳಿಂದ ಬರುವ ಮಂದಿಯನ್ನು ಉಡುಪಿ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಗಳಿಗೆ ಸೇರ್ಪಡೆಗೊಳಿಸುತ್ತಿದೆ. ಆದರೆ ಇಂತಹ ಕ್ವಾರಂಟೈನ್ ಕೇಂದ್ರಗಳೇ ಮೋಜು ಮಸ್ತಿಯ ಅಡ್ಡೆಗಳಾಗುತ್ತಿವೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ವಾರಂಟೈನ್ ಕೇಂದ್ರದಲ್ಲಿ ಬರ್ತ್ ಡೇ ಪಾರ್ಟಿ ನಡೆದಿರುವುದು ಆತಂಕಕಾರಿಯಾದ ಸಂಗತಿಯಾಗಿದೆ.
ಕಾರ್ಕಳದ ಸಾಣೂರು ಪ್ರಕೃತಿ ಆಂಗ್ಲಮಾದ್ಯಮ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದ ಪಾರ್ಟಿಯಲ್ಲಿ ಕಾರ್ಕಳ ಬಿಜೆಪಿ ಯುವ ಮೋರ್ಚಾ ಅದ್ಯಕ್ಷ ಕರುಣಾಕರ ಕೋಟ್ಯಾನ್, ಕಾಂತಾವರ ಪಂಚಾಯತ್ ಅದ್ಯಕ್ಷ ರಾಜೇಶ್ ಕೋಟ್ಯಾನ್, ಯುವ ಮೋರ್ಚಾ ಕಾರ್ಯದರ್ಶಿ ನವೀನ್ ಕಾಂತಾವರ ಕ್ವಾರಂಟೈನ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಅನೇಕರಿಗೆ ಸೋಂಕು ತಗಲುತ್ತಿರುವ ಈ ಹೊತ್ತಿನಲ್ಲಿ, ಅವರು ಕ್ವಾರಂಟೈನ್ ಆಗಿರುವ ಕೇಂದ್ರದಲ್ಲಿ ಹೀಗೆ ಒಟ್ಟು ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಜ್ಞಾವಂತ ಜನ ಪ್ರಶ್ನಿಸತೊಡಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಗ್ರಹಿಸಿದ್ದಾರೆ