ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಗುಂಡೂರು ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಮತ್ತು ಇಂದಬೆಟ್ಟು ಗ್ರಾಮದ ಬೀಟ್ ಸಿಬ್ಬಂದಿಗೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ಪೊಲೀಸರು ಸೆ.6 ರಂದು ಸಂಜೆ 3:15 ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಎರಡು ಕೋಳಿಗಳ ಕಾಲಿಗೆ ಬಾಳು ಕಟ್ಟಿ, ಅವುಗಳನ್ನು ಎದುರುಬದುರು ಹಾರಿಸಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರನ್ನು ಕಂಡ ಕೆಲವರು ಕೋಳಿಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಹಿಂಬಾಲಿಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರನ್ನು ಕಡಿರುದ್ಯಾವರ ಗ್ರಾಮದ ತಿಮ್ಮಯ್ಯ ಗೌಡ (59), ಕಲ್ಮಂಜ ಗ್ರಾಮದ ರಾಘವೇಂದ್ರ (37), ಕಣಿಯೂರು ಗ್ರಾಮದ ಉಮೇಶ್ (26), ಕಡಿರುದ್ಯಾವರ ಗ್ರಾಮದ ಬಾಲಕೃಷ್ಣ ಗೌಡ (58) ಹಾಗೂ ಮುಂಡಾಜೆ ಗ್ರಾಮದ ಭವಿತ್ (24) ಎಂದು ಗುರುತಿಸಲಾಗಿದೆ.
ಸ್ಥಳದಲ್ಲಿ ಮೂರು ಕೋಳಿಗಳು ಹಾಗೂ ಒಂದು ಸಣ್ಣ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೋಳಿ ಅಂಕಕ್ಕೆ ಬಳಸಿದ್ದರೆನ್ನಲಾದ ಒಟ್ಟು 3,400 ರೂಪಾಯಿ ನಗದು ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 87 ಕೆಪಿ ಆಕ್ಟ್, 11(1)(a)(n) Prevention of Animal Cruelty Act ಹಾಗೂ 112 r/w 3(5) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


