ಬೆಳ್ತಂಗಡಿ: ತಾಲೂಕಿನ ಎಳನೀರು ಸಮೀಪದ ಬಂಗಾರ್ ಪಲ್ಕೆ ಎಂಬಲ್ಲಿ ಕಾಡಿನ ಮಧ್ಯೆ ಇರುವ ಜಲಪಾತ ವೀಕ್ಷಿಸಲು ತೆರಳಿದ್ದ ನಾಲ್ಕು ಮಂದಿಯ ಮೇಲೆ ಗುಡ್ಡ ಜರಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಮಣ್ಣಿನಡಿ ಸಿಲುಕಿದ್ದು, ಉಳಿದ ಮೂವರು ಪಾರಾಗಿದ್ದಾರೆ.
ಲಾಯಿಲ ಗ್ರಾಮದ ಕಾಶಿಬೆಟ್ಟು ಕೃಷ್ಣಯ್ಯ ವಾಸುದೇವ ಶೆಟ್ಟಿ ಅವರ ಪುತ್ರ ಉಜಿರೆ ಎಸ್ ಡಿಎಂ ಕಾಲೇಜು ದ್ವಿತೀಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ (21) ಮಣ್ಣಿನಡಿ ಸಿಲುಕಿದ್ದು, ತೆರವಿಗೆ ಎಸ್ ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕದಳ, ಶ್ರೀ.ಕ್ಷೇ.ಧ. ವಿಪತ್ತು ನಿರ್ವಹಣಾ ತಂಡ ಸತತ ಕಾರ್ಯಾಚರಣೆಯಲ್ಲಿ ಹರಸಾಹಸ ಪಟ್ಟಿದೆ.
ಉಜಿರೆ ನಿವಾಸಿಯಾಗಿರುವ ಸನತ್ ಶೆಟ್ಟಿ ಸಹಿತ ಮೂವರು ಕ್ರಿಕೆಟ್ ಪಂದ್ಯಾಟವಾಡಲು ಸಂಸೆಯಲ್ಲಿರುವ ತನ್ನ ಸ್ನೇಹಿತನಾದ ಆದಿತ್ಯ ಮನೆಗೆ ರವಿವಾರ ತೆರಳಿದ್ದರು. ರವಿವಾರ ಅಲ್ಲೇ ತಂಗಿದ್ದು, ಸೋಮವಾರ ಮಧ್ಯಾಹ್ನ ಜಲಪಾತ ವೀಕ್ಷಿಸಿ ಉಜಿರೆ ಮರಳುವವರಿದ್ದರು. ಹಿಂದಿರುಗುವ ವೇಳೆ ಜಲಪಾತದಂಚಿನಲ್ಲಿದ್ದ ಗುಡ್ಡ ಕುಸಿತವಾಗಿ ಸನತ್ ಶೆಟ್ಟಿ ಮೇಲೆ ಬಿದ್ದಿದೆ.
ಘಟನೆಯಲ್ಲಿ ಸನತ್ ಶೆಟ್ಟಿ ಬದುಕಿರುವುದು ಸಂಶಯವಾಗಿದೆ. ಈಗಾಗಲೇ ಮಣ್ಣಿನಡಿ ಸಿಲುಕಿದ ಸನತ್ ಶೆಟ್ಟಿಯನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಬೃಹತ್ ಗಾತ್ರದ ಬಂಡೆಗಳು ಮರಗಳು ಕುಸಿದು ಬಿದ್ದಿರುವುದರಿಂದ ಆ ಜಾಗಕ್ಕೆ ಯಾವುದೇ ರೀತಿಯ ವಾಹನ ಹೋಗಲಾಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆಗೆ ತೊಡಕುಂಟಾಗಿದೆ.
ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಎನ್ಡಿಆರ್ಎಫ್ ತಂಡ ಮತ್ತು ಸ್ಥಳೀಯ ಯುವಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳದಲ್ಲಿ ಇದ್ದಾರೆ. ಸ್ಥಳಕ್ಕೆ ಮಲವಂತಿಗೆ ಗ್ರಾಮಕರಣಿಕ ರಾಘವೇಂದ್ರ, ಸಹಾಯಕ ಮಂಜುನಾಥ್, ಗ್ರಾ.ಪಂ. ಸದಸ್ಯ ಪ್ರಕಾಶ್ ಕುಮಾರ್ ಜೈನ್, ಎ.ಎಸ್.ಐ ತಿಲಕ್, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಆರ್.ಐ. ಪ್ರತೀಕ್ಷ್, ಎನ್.ಡಿ.ಆರ್.ಎಫ್., ಶ್ರೀಂಗೇರಿ ಅಗ್ನಿಶಾಮಕದಳ ಭೇಟಿ ನೀಡಿದೆ.
ದಿಡುಪೆ ಕಜಕೆಯಿಂದ 12 ಕಿ.ಮೀ ದೂರದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಂಚಿನಲ್ಲಿರುವ ಜಲಪಾತವಾಗಿದ್ದು, ದುರ್ಗಮ ಹಾದಿಯಲ್ಲಿ ಜೆಸಿಬಿ, ಕ್ರೇನ್ ಸಾಗಲು ಸಾಧ್ಯವಾಗದಿರುವುದರಿಂದ ಸ್ಥಳೀಯರ ಸಹಾಯದಿಂದ ಮಾನವ ಶ್ರಮದಿಂದ ತೆರವುಕಾರ್ಯ ಮುಂದುವರಿದಿದೆ.