ಬೆಳ್ತಂಗಡಿ: ವಿದ್ಯುತ್ ಬಿಲ್ ವಿಚಾರದಲ್ಲಿ ಮೆಸ್ಕಾಂ ಪವರ್ ಮ್ಯಾನ್ ಗಳ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಜೇಶ್ ನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಕ್ಕಡದ ಪವರ್ ಮ್ಯಾನ್ ಗಳಾದ ದುಂಡಪ್ಪ ಜಂಗಪ್ಪಗೊಳ ಮತ್ತು ಉಮೇಶ್ ಎಂಬವರ ಮೇಲೆ ವಿದ್ಯುತ್ ಬಿಲ್ ವಿಚಾರದಲ್ಲಿ ಧರ್ಮಸ್ಥಳದ ಅಜುಕುರಿ ನಿವಾಸಿ ಲಾರಿ ಮಾಲೀಕ&ಚಾಲಕನಾಗಿರುವ ಆರೋಪಿ ರಿಜೇಶ್(41) ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದ ಬಳಿಕ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 323, 504, 506 ಪ್ರಕರಣ ದಾಖಲಾಗಿತ್ತು. ಇದೀಗ ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ವಿವರ: ಹತ್ಯಡ್ಕ ಗ್ರಾಮದ ಅಡ್ಕಾಡಿ ಎಂಬಲ್ಲಿಯ ಕಾಂತು ಪೂಜಾರಿ ಎಂಬವರು ವಿದ್ಯುತ್ ಬಿಲ್ ಕಟ್ಟದೇ ಬಾಕಿ ಇರಿಸಿಕೊಂಡಿದ್ದರು. ಈ ಬಗ್ಗೆ ಲೈನ್ ಮ್ಯಾನ್ ಉಮೇಶ್ ಬುಧವಾರ ಅವರ ಮನೆಗೆ ತೆರಳಿ ಬಿಲ್ ಕಟ್ಟುವಂತೆ ತಿಳಿಸಿದಾಗ ಹಣ ಇಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಮೆಸ್ಕಾಂ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮನೆಯ ಕನೆಕ್ಷನ್ ಕಟ್ ಮಾಡಿ ಫ್ಯೂಸ್ ಹಿಡಿದುಕೊಂಡು ಬಂದಿದ್ದಾರೆ. ನಂತರ ಕಾಂತು ಪೂಜಾರಿಯವರ ಅಳಿಯ ರಿಜೇಶ್ ಅವರು ಪೋನ್ ಮಾಡಿ ಲೈನ್ ಮ್ಯಾನ್ ಗಳಿಗೆ ಹಾಗೂ ಜೆಇ ಅವರಿಗೂ ನೀವು ಕನೆಕ್ಷನ್ ಕಟ್ ಮಾಡಿದ್ದು ಯಾಕೆ ಬಿಲ್
ಕಟ್ಟುತ್ತೇವೆ ತಕ್ಷಣ ಕನೆಕ್ಷನ್ ಕೊಡಿ ಎಂದು ಹೇಳಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಎನ್ನಲಾಗಿದೆ.
ನಂತರ ಅನ್ ಲೈನ್ ನಲ್ಲಿ ಬಿಲ್ಲ್ ಪಾವತಿಸಿದ್ದು ಗುರುವಾರ ಅವರ ಮನೆಗೆ ಲೈನ್ ಮ್ಯಾನ್ ಗಳು ಹೋಗಿ ಕನೆಕ್ಷನ್ ನೀಡಿದ್ದಾರೆ.
ರಾತ್ರಿ ಸುಮಾರು 9 ಗಂಟೆಗೆ ಕೊಕ್ಕಡ ಪೇಟೆಯಲ್ಲಿ ಲೈನ್ ಮ್ಯಾನ್ ಗಳಾದ ಉಮೇಶ್(33) ಮತ್ತು ದುಂಡಪ್ಪ (27) ಅವರು ಇದ್ದಾಗ ಏಕಾಏಕಿ ರಿಜೇಶ್ ಮತ್ತಿತರರು ಬಂದು ವಿದ್ಯುತ್ ಕನೆಕ್ಷನ್ ಕಟ್ ಮಾಡಿದ ಬಗ್ಗೆ ತಗಾದೆ ತೆಗೆದು ಉಮೇಶ್ ಅವರಿಗೆ ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯಲು ಬಂದ ದುಂಡಪ್ಪ ಜಂಗಪ್ಪಗೊಳ ಅವರಿಗೆ ಅಲ್ಲೆ ಇದ್ದ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿದ್ದು ಅವರ ತಲೆಗೆ ಗಂಭೀರ ಗಾಯಗಳಾಗಿದೆ.
ಹಲ್ಲೆಗೊಳಗಾದ ಲೈನ್ ಮ್ಯಾನ್ ದುಂಡಪ್ಪ ಜಂಗಪ್ಪಗೊಳ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.