ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ವಿಚಾರ ಸ್ಪಷ್ಟನೆ ಕೋರಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ 8 ಮಂದಿಗೆ ನೋಟೀಸು ಜಾರಿ ಮಾಡಿದ್ದಾರೆ. ನೋಟಿಸ್ ಪ್ರತಿ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟಿಗೆ ಲಭ್ಯವಾಗಿದೆ.
ಬೆಳ್ತಂಗಡಿಯ ವಾರ ಪತ್ರಿಕೆಯೊಂದರಲ್ಲಿ ಜೂನ್ 3 ರಂದು ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರ ಶಾಸಕತ್ವಕ್ಕೆ ಮೂರು ವರ್ಷ ಪೂರೈಸಿರುವ ಪ್ರಯುಕ್ತ ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೇರಾಜೆ, ಲೋಕೇಶ್ವರಿ ವಿನಯಚಂದ್ರ, ನೋಟರಿ ವಕೀಲರಾದ ಭಗೀರಥ ಜಿ, ಕೃಷ್ಣಪ್ಪ ಪೂಜಾರಿ, ಕೆ ನಾರಾಯಣ ರಾವ್ ಶಿರ್ಲಾಲು,ಕೆಲ್ಲಗುತ್ತಿನ ನಿರಂಜನ ಬಾವಂತಬೆಟ್ಟು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೋದರಾದ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ , ಪಿ.ಕೆ ರಾಜು ಪೂಜಾರಿಯವರು ಶುಭ ಹಾರೈಸಿ ಶಾಸಕರ ಕಾರ್ಯವೈಖರಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಜಾಹಿರಾತು ನೀಡಿದ ಬಗ್ಗೆ ಕಾಂಗ್ರೇಸ್ ಪಕ್ಷದಲ್ಲಿ ಭಾರಿ ಸಂಚಲನ ಉಂಟಾಗಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರರು ಆಕ್ರೋಶಗೊಂಡಿದ್ದರು, ಈ ನಡವಳಿಕೆ ಕಾಂಗ್ರೆಸ್ ಪಕ್ಷದ ಶಿಸ್ತಿಗೆ ವಿರುದ್ಧವಾಗಿ ಕಂಡು ಬಂದಿರುವುದರಿಂದ ಈ ಬಗ್ಗೆ ಏಳು ದಿನಗಳ ಒಳಗೆ ಸ್ಪಷ್ಟೀಕರಣ ನೀಡಬೇಕು ಇಲ್ಲವಾದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಹಾಗೂ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ ಇವರುಗಳಿಗೆ ನೋಟೀಸು ಜಾರಿ ಮಾಡಿದ್ದಾರೆ.