ಪುತ್ತೂರು: ಕೆಲವರು ಎಷ್ಟೇ ಎತ್ತರಕ್ಕೆ ಏರಿದ್ರೂ ಅವರು ನಡೆದು ಬಂದ ಹಾದಿಯನ್ನು ಮರೆಯೋದಿಲ್ಲ. ಅವರ ಆ ಗುಣವೇ ಅವರನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಟರ್ ಜನರಲ್ ಕೆ.ಎಂ ನಟರಾಜ್.
ಕೃಷಿ ಕುಟುಂಬದಿಂದ ಬಂದಿರುವ ಕೆ.ಎಂ ನಟರಾಜ್ ರವರ ಇಡೀ ಕುಟುಂಬವೇ ಕೃಷಿಯನ್ನೇ ಮಾಡಿ ಜೀವನ ನಡೆಸಿದೆ..ಬಾಲ್ಯದಲ್ಲಿ ಅನ್ನ ನೀಡಿದ ಕೃಷಿಯನ್ನು,ಇದೀಗ ಅತ್ಯುನ್ನತ ಹುದ್ದೆಯಲ್ಲಿದ್ದರೂ ನಟರಾಜ್ ರವರು ಮರೆತಿಲ್ಲ..
ದೆಹಲಿಯಲ್ಲಿ ಸುಪ್ರೀಂಕೋರ್ಟ್ ನ ಕಲಾಪಗಳಲ್ಲಿ ವರ್ಷಪೂರ್ತಿ ಬ್ಯುಸಿಯಾಗಿರುವ ನಟರಾಜ್ ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದರೂ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿರಲಿಲ್ಲ.
ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ದೇಶದೆಲ್ಲೆಡೆ ಹೇರಿಕೆಯಾದ ಕಾರಣ, ನಟರಾಜ್ ದೆಹಲಿಯಿಂದ ನೇರವಾಗಿ ಊರಿಗೆ ಬಂದಿದ್ದಾರೆ. ಮನೆಯಿಂದಲೇ ಸುಪ್ರೀಂಕೋರ್ಟ್ ನಲ್ಲಿನ ತನ್ನ ಕೆಲಸವನ್ನು ನಿರ್ವಹಿಸುತ್ತಿರುವ ಇವರು ತನ್ನ ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ನಟರಾಜ್ ರವರ ಮನೆಯಲ್ಲಿ ಅನಾದಿ ಕಾಲದಿಂದಲೂ ಭತ್ತದ ಬೇಸಾಯವನ್ನು ಮಾಡುತ್ತಿದ್ದು, ಈ ಬಾರಿ ಮುಂಗಾರು ಆರಂಭದ ಕಾರಣ ಕೆಲಸದಲ್ಲಿ ತೊಡಗಿಕೊಳ್ಳುವ ಅವಕಾಶ ಸಿಕ್ಕಿದೆ..ಖುಷಿಯಿಂದಲೇ ಕೆಸರಿನ ಗದ್ದೆಗೆ ಇಳಿದ ನಟರಾಜ್ ಟ್ಯಾಕ್ಟರ್ ಹಾಗೂ ಟಿಲ್ಲರ್ ಮೂಲಕ ಗದ್ದೆಯನ್ನು ಸಂಪೂರ್ಣ ಹದ ಮಾಡಿದ್ದಾರೆ..ಸಾಮಾನ್ಯ ರೈತನಂತೇ ಹಳೆಯ ಶರ್ಟು, ಲುಂಗಿ ಹಾಕಿಕೊಂಡು ಗದ್ದೆಯಲ್ಲಿ ಉಳುಮೆ ಮಾಡಿದ್ದಾರೆ. ಕೃಷಿ ನನ್ನ ರಕ್ತದಿಂದಲೇ ಬಂದಿರುವ ಕಾರಣ, ಮಣ್ಣಿನ ಖುಣ ನನ್ನ ಮೇಲೆಯೂ ಇರುವ ಕಾರಣಕ್ಕಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.