ಬೆಳ್ತಂಗಡಿ: ಚಾಲಕನೊಬ್ಬ ತನ್ನ ರಿಕ್ಷಾವನ್ನು ದುಡುಕುತನದಿಂದ ಚಲಾಯಿಸಿ ರಸ್ತೆಯ ಎಡಬದಿಯ ಕಬ್ಬಿಣದ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ಸೋಮಾವತಿ ಸೇತುವೆಯ ಸಮೀಪದಲ್ಲಿರುವ ಅದ್ವೈತ್ ಹುಂಡೈ ಶೋ ರೂಮ್ ನ ಬಳಿ ನಡೆದಿದೆ.
ಮೃತರನ್ನು ಒಡಿಲ್ನಾಳ ಗ್ರಾಮದ ಲಕ್ಷ್ಮಿ ಯಾನೆ ದುಗ್ಗಮ್ಮ(65) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸುಮಾರು 8 ಗಂಟೆ ಸುಮಾರಿಗೆ ಉಜಿರೆಯಿಂದ ಬೆಳ್ತಂಗಡಿಗೆ ಆಗಮಿಸುತ್ತಿದ್ದ ಸಮಯದಲ್ಲಿ ರಿಕ್ಷಾ ಅಪಘಾತ ಸಂಭವಿಸಿದೆ. ಈ ಸಮಯದಲ್ಲಿ ಆಟೋ ರಿಕ್ಷಾ ಜಖಂ ಆಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮಿರವರಿಗೆ ಬಲ ಕೆನ್ನೆಗೆ, ಗಲ್ಲಕ್ಕೆ ತೀವ್ರ ಗಾಯ, ಲೀಲಾರವರಿಗೆ ಎಡಕಾಲಿಗೆ, ತಲೆಗೆ ಗುದ್ದಿ ಗಾಯ, ಯತೀಶರವರಿಗೆ ಬಲ ಕೈ ಭುಜಕ್ಕೆ ಗುದ್ದಿದ ಗಾಯ, ಚಾಲಕ ಬೇಬಿ ಗೌಡರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿತ್ತು.
ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಲೀಲಾ, ಯತೀಶ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಲಕ್ಷ್ಮಿ ಎಂಬುವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.