ಬೆಂಗಳೂರು: ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂದು ಹೇಳಿಕೆ ನೀಡಿದ್ದ ಪ್ರೊ. ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರರನ್ನು ವಿಚಾರಣೆ ನಡೆಸಿರುವ ಬಾರ್ ಕೌನ್ಸಿಲ್ ಉಪಸಮಿತಿಯು ಕರ್ನಾಟಕ ಬಾರ್ ಕೌನ್ಸಿಲ್ಗೆ ವಿಚಾರಣಾ ವರದಿ ಸಲ್ಲಿಕೆ ಮಾಡಿದೆ. ವರದಿಯಲ್ಲಿ ವಕೀಲೆ ವಿರುದ್ಧ ದುರ್ನಡತೆಯ ಆರೋಪ ಉಲ್ಲೇಖಿಸಲಾಗಿದೆ.
ಬಾರ್ ಕೌನ್ಸಿಲ್ ಸದಸ್ಯರಾದ ಎನ್.ಶಿವಕುಮಾರ್, ಎಂ.ದೇವರಾಜ ಹಾಗೂ M.N.ಮಧುಸೂದನ್ರೊಳಗೊಂಡ ಉಪಸಮಿತಿ ಉನ್ನತ ಮಟ್ಟದಲ್ಲಿ ವಿಚಾರಣೆ ನಡೆಸಲಿದೆ. ಹಾಗಾಗಿ, ಶಿಸ್ತು ವಿಚಾರಣೆ ಮುಗಿಯುವವರೆಗೆ ಮೀರಾ ರಾಘವೇಂದ್ರ ಅವರ ವಕೀಲಿಕೆಯ ಸನ್ನದು ಅಮಾನತಿಗೆ ಶಿಫಾರಸು ಮಾಡಲಾಗಿದೆ.
ಏನಿದು ಪ್ರಕರಣ?
ಪ್ರೊ.ಭಗವಾನ್ ಅವರು ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ವಕೀಲೆ ಮೀರಾ ರಾಘವೇಂದ್ರ, ದೂರು ದಾಖಲಿಸಿದ್ದರು. ಈ ಕೇಸ್ನ ಸಂಬಂಧ ಫೆ.4ರಂದು ವಿಚಾರಣೆ ನಡೆಸಿದ ಬೆಂಗಳೂರಿನ 2 ನೇ ಎಸಿಎಂಎಂ ನ್ಯಾಯಾಲಯ, ಜಾಮೀನು ನೀಡಿತ್ತು. ಕೋರ್ಟ್ನಿಂದ ಭಗವಾನ್ ಅವರು ಹೊರ ಬರುತ್ತಿದ್ದಂತೆ ಸಿಟ್ಟಿಗೆದ್ದ ಮೀರಾ, ‘ಇಷ್ಟು ವಯಸ್ಸು ಆಗಿದೆ. ಇನ್ನು ನಾಚಿಕೆಯಾಗಲ್ವಾ? ರಾಮನ ಬಗ್ಗೆ, ಹಿಂದು ಧರ್ಮದ ಬಗ್ಗೆ ಮಾತಾನಾಡ್ತೀರಾ?’ ಎಂದು ಮಸಿ ಬಳಿದು ಆಕ್ರೋಶ ಹೊರಹಾಕಿದ್ದರು. ತನ್ನ ಮುಖಕ್ಕೆ ಮಸಿ ಬಳಿದಿದ್ದ ಭಗವಾನ್ ಮುಖಕ್ಕೆ ಮಸಿ ಬಳಿಸಿದ್ದ ವಕೀಲೆ ಮೀರಾ ಮತ್ತು ಅವರ ಪತಿ ರಾಘವೇಂದ್ರ ವಿರುದ್ಧ ಪ್ರೊ. ಭಗವಾನ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಕೋರ್ಟ್ ಆವರಣದಲ್ಲೇ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಮೈಸೂರಿಗೆ ಹೋಗುವಷ್ಟರಲ್ಲಿ ನಮ್ಮ ಹುಡುಗರು ನಿನ್ನನ್ನು ಕೊಲ್ಲಲಿದ್ದಾರೆ. ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ ಎಂದು ವಕೀಲೆ ಪ್ರೊ.ಕೆ.ಎಸ್. ಭಗವಾನ್ಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದಡಿ ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.