ಬಂಟ್ವಾಳ: ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿಯ ವೇಳೆ ತಮ್ಮ ಮನೆಯ ಮುಂದೆ ತೆಗೆದ ಚರಂಡಿಗೆ ಮೋರಿ ಹಾಕಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿ, ಪೊಲೀಸರ ಮಧ್ಯ ಪ್ರವೇಶದ ಬಳಿಕ ಮೋರಿ ಅಳವಡಿಸಿದ ಅಪರೂಪದ ಘಟನೆ ಮಯ್ಯರಬೈಲುನಲ್ಲಿ ನಡೆದಿದೆ.
ಈ ರೀತಿ ವಿನೂತವಾಗಿ ಪ್ರತಿಭಟನೆ ನಡೆಸಿರುವವರು ಮಯ್ಯರಬೈಲು ನಿವಾಸಿ ಉದಯ ಕುಮಾರ್ ರಾವ್.
ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉದಯ ಕುಮಾರ್ ರಾವ್ ಅವರ ಮನೆಯ ಆವರಣಕ್ಕೆ ನೀರು ಹಾಗೂ ಮಣ್ಣು ಕೊಚ್ಚಿಕೊಂಡು ಬಂದಿತ್ತು. ಡೆಕೋರೇಶನ್ ವೃತ್ತಿ ನಿರ್ವಹಿಸುವ ಅವರ ಅಲಂಕಾರಕ್ಕೆ ಬಳಸುವ ಪರಿಕರಗಳಿಗೂ ಇದರಿಂದ ಹಾನಿಯಾಗಿತ್ತು.
ಹೀಗಾಗಿ ಅವರು ಚರಂಡಿ ಅಗೆದು ಮೋರಿ ಅಳವಡಿಸಬೇಕು ಎಂದು ಒತ್ತಡ ಹಾಕಿದ ಪರಿಣಾಮ ಕಾಮಗಾರಿ ನಿರ್ವಹಿಸುವ ಸಂಸ್ಥೆಯವರು ಕೇವಲ ಚರಂಡಿ ತೆಗೆದು ಹೋಗಿದ್ದರು. ಉದಯಕುಮಾರ್ ಅವರ ಕಾಲಿಗೆ ಶಸ್ತಚಿಕಿತ್ಸೆ ನಡೆದಿದ್ದು, ಹೀಗಾಗಿ ಅವರಿಗೆ ನಡೆದುಕೊಂಡು ಹೋಗುವುದಕ್ಕೆ ಕಷ್ಟವಾಗುತ್ತಿದೆ.
ಇಂದು ವೈದ್ಯರ ಬಳಿ ಹೋಗಿ ಹಿಂದುರುಗಿದ ಅವರು ಮೋರಿ ಹಾಕದೆ ಮನೆಗೆ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಕುಳಿದರು. ಈ ವಿಚಾರ ಪೊಲೀಸರಿಗೆ ತಿಳಿದು ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಮೋರಿ ಹಾಕುವಂತೆ ಕಾಮಗಾರಿ ನಡೆಸುವವರಿಗೆ ಸೂಚಿಸಿದ ಬಳಿಕ ಮೋರಿ ಅಳವಡಿಸಲಾಯಿತು.