ಬಂಟ್ವಾಳ: ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ಬಿ.ಸಿ. ರೋಡ್ ಚಲೋಗೆ ಬಜರಂಗದಳ ಕರೆ ನೀಡಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದ ಹಿನ್ನೆಲೆಯಲ್ಲಿ, ಫೇಸ್ ಬುಕ್ ನಲ್ಲಿ ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ನಾಳೆ ಬೆಳಿಗ್ಗೆ ಬಿ.ಸಿ. ರೋಡ್ ಗೆ ಬರುವುದಾಗಿ ಪೋಸ್ಟ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಗಲಾಟೆ ಹಿನ್ನೆಲೆಯಲ್ಲಿ ಈದ್ ಮೆರವಣಿಗೆ ತಡೆಯುವ ಕುರಿತಾಗಿ ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಇತರರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಹರಿಬಿಟ್ಟಿದ್ದ ಮುಸ್ಲಿಂ ಮುಖಂಡರು, ತಾಕತ್ತಿದ್ದರೆ ನಾಳೆ ಈದ್ ಮಿಲಾದ್ ಮೆರವಣಿಗೆ ಬಂದು ನಿಲ್ಲುವಂತೆ ಸವಾಲು ಹಾಕಿದ್ದರು.
ನಾಳೆ ಬೆಳಗ್ಗೆ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿಂದ ಕೈಕಂಬ ಮಸೀದಿಯವರೆಗೆ ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಮುಸ್ಲಿಂ ಮುಖಂಡರ ಆಡಿಯೋ ಸವಾಲು ಸ್ವೀಕರಿಸಿರುವ ಬಜರಂಗದಳ-ವಿಶ್ವ ಹಿಂದೂ ಪರಿಷತ್ ನಾಳೆ ಬಿ.ಸಿ. ರೋಡ್ ಚಲೋಗೆ ಕರೆ ಕೊಟ್ಟಿದೆ.


