ಲಖ್ನೋ: ಉತ್ತರಪ್ರದೇಶದ ಔರೈಯಾ ಸಮೀಪ ನಡೆದ ಭೀಕರ ಅಪಘಾತದಲ್ಲಿ 23 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಬೆಳಗಿನ ಜಾವ ಎರಡು ಟ್ರಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಸುಮಾರು 20 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಲಾಕ್ ಡೌನ್ ಜಾರಿಯಾದ ನಂತರ ಉದ್ಯೋಗದ ಸ್ಥಳದಲ್ಲಿ ಕೆಲಸ ಇಲ್ಲದಂತಾಗಿ ತವರಿನತ್ತ ವಲಸೆ ಕಾರ್ಮಿಕರು ಮುಖಮಾಡಿದ್ದಾರೆ. ಹೀಗೆ ರಾಜಸ್ಥಾನ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಿಂದ ತಮ್ಮ ಗ್ರಾಮಗಳಿಗೆ ವಲಸೆ ಕಾರ್ಮಿಕರು ತೆರಳುತ್ತಿದ್ದರು.
ಆಹಾರ ಸಾಮಗ್ರಿ ಸಾಗಿಸುತ್ತಿದ್ದ ಟ್ರಕ್ ನಲ್ಲಿ ವಲಸೆ ಕಾರ್ಮಿಕರು ತೆರಳುತ್ತಿದ್ದು, ಕಾರ್ಮಿಕರು ಇದ್ದ ಟ್ರಕ್ ಗೆ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳು ಕಾರ್ಮಿಕರನ್ನು ರಕ್ಷಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.