ಬೆಳ್ತಂಗಡಿ :ಯುವತಿಯೊಬ್ಬಳೊಂದಿಗೆ ಬಸ್ಸಿನಲ್ಲಿ ಮಾತನಾಡಿದ ಕಾರಣಕ್ಕೆ ಯುವಕನನ್ನು ತಂಡವೊಂದು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಉಜಿರೆಯಲ್ಲಿ ಮಂಗಳವಾರ ನಡೆದಿದೆ. ಕಕ್ಕಿಂಜೆ ನಿವಾಸಿ ಸಾಹಿಲ್ (22) ಹಲ್ಲೆಗೊಳಗಾದ ಯುವಕ.
ಸಾಹಿಲ್ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಇಂದು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತು ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಯುವತಿ ಬೆಳ್ತಂಗಡಿಯಲ್ಲಿ ಇಳಿದಿದ್ದಾಳೆ. ಬಸ್ಸಿನಲ್ಲಿ ಇವರನ್ನು ಗಮನಿಸಿ ಯಾರೋ ಉಜಿರೆಯ ಯುವಕರಿಗೆ ಮಾಹಿತಿ ನೀಡಿದ್ದು ಈತನನ್ನು ಉಜಿರೆಯಲ್ಲಿ ಕಾದು ನಿಂತಿದ್ದ ಯುವಕರ ತಂಡ ಬಸ್ಸಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಹಲ್ಲೆಗೆ ಒಳಗಾಗಿರುವ ಸಾಹಿಲ್ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಪೊಲೀಸರು ಇದೀಗ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್.ಡಿ.ಪಿ ಐ ಪಕ್ಷದ ತಾಲೂಕು ಅಧ್ಯಕ್ಷ ನವಾಜ್ ಕಟ್ಟೆ ಹಾಗೂ ಇತರ ಮುಖಂಡರುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಗೆ ಧೈರ್ಯ ತುಂಬಿದ್ದಾರೆ.