ಉಡುಪಿ: ಕೇಳಿದ ಸಮಯಕ್ಕೆ ಮಾತ್ರೆ ನೀಡದ ಮೆಡಿಕಲ್ ಶಾಪ್ ಮಾಲಕರ ಮೇಲೆ ವ್ಯಕ್ತಿಗಳಿಬ್ಬರು ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಕೊಡಂಕೂರಿನಲ್ಲಿ ಮೆಡಿಕಲ್ ಶಾಪ್ ವೊಂದನ್ನು ನಡೆಸುತ್ತಿರುವ ಪುಷ್ಪರಾಜ್ ಶೆಟ್ಟಿ ನಿನ್ನೆ ಸರ್ಕಾರದ ಆದೇಶದಂತೆ ರಾತ್ರಿ 8 ಗಂಟೆ ವೇಳೆಗೆ ಮೆಡಿಕಲ್ ಬಂದ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಹರೀಶ್ ಎಂಬವರು ಮಗನ ಜೊತೆ ಮೆಡಿಕಲ್ ಶಾಪ್ ಗೆ ಬಂದಿದ್ದಾರೆ. ಹಾಗೇ ಬಂದವರು ಬಿಪಿ ಮಾತ್ರೆ ಕೇಳಿದ್ದಾರೆ. ಸಮಯ ಆಗಿದ್ದರಿಂದ ಶಾಪ್ ಮುಚ್ಚಲು ಹೊರಟ್ಟಿದ್ದ ಪುಷ್ಪರಾಜ್ ಶೆಟ್ಟಿ ನಾಳೆ ಬೆಳಿಗ್ಗೆ ಕೊಡುವುದಾಗಿ ತಿಳಿಸಿದ್ದಾರೆ.
ಇದನ್ನು ಕೇಳದ ಗ್ರಾಹಕರು ಮಾತಿಗೆ ಮಾತು ಬೆಳೆಸಿದ್ದಾರೆ, ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹರೀಶ್ ಹಾಗೂ ಅವರ ಮಗ ಕೈಯಿಂದ ಪುಷ್ಪರಾಜ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯಿಂದ ಪುಷ್ಪರಾಜ್ ಮುಖಕ್ಕೆ, ಕಣ್ಣಿನ ಕೆಳಗೆ ಗಾಯವಾಗಿದೆ. ಇಷ್ಟು ಮಾತ್ರವಲ್ಲದೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.