ಮಂಗಳೂರು: ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕ್ಷುಲ್ಲಕ ಕಾರಣಕ್ಕೆ ದಂಪತಿ ಮೇಲೆ ಹಲ್ಲೆ ಮಾಡಿ ಇರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕನೀರ್ ತೋಟ ಬಳಿ ನಡೆದಿದೆ.
ಕನೀರ್ ತೋಟ ನಿವಾಸಿ ವಿಜಯಾ ಲಕ್ಷ್ಮಿ ಹಲ್ಲೆಗೆ ಒಳಗಾದವರು. ಮೊನ್ನೆ ರಾತ್ರಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ ಹಾಕುತ್ತಿದ್ದರು. ಈ ವೇಳೆ ಮನೆಯ ಬಳಿ ಸ್ಕೂಟರಲ್ಲಿ ತೆರಳುತ್ತಿದ್ದ ಶೇಖರ್ ಎಂಬಾತ ವಿನಾ ಕಾರಣ ಹಾರ್ನ್ ಹೊಡೆದಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ವಿಜಯಲಕ್ಷ್ಮಿ ಅವರು ಶೇಖರನಲ್ಲಿ ಪ್ರಶ್ನಿಸಿದ್ದಾರೆ. ಇದರಿಂದ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಕಾರಣದಿಂದ ಆಕ್ರೋಶಗೊಂಡ ಶೇಖರ್ ತನ್ನ ಸ್ನೇಹಿತರಾದ ಹರೀಶ್, ನೂತನ್, ಯಶ್ ರಾಜ್ ಜೊತೆ ವಿಜಯ ಲಕ್ಷ್ಮಿ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದು, ಈ ವೇಳೆ ತಡೆಯಲು ಬಂದ ಅವರ ಪತಿ ತೇಜ್ ಪಾಲ್, ಮಕ್ಕಳಾದ ಹಿತೇಶ್ ಮತ್ತು ಹರ್ಷ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಜಯಲಕ್ಷ್ಮಿ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.