ಮುಂಬೈ: ಎಟಿಎಂಗಳಿಗೆ ಹಣ ತುಂಬಲು ಕೊಂಡೊಯ್ಯುತ್ತಿದ್ದ ಸುಮಾರು 4.25 ಕೋಟಿ ರೂ ಹಣ ಹಾಗೂ ಗಾಡಿಯೊಂದಿಗೆ ಚಾಲಕ ಎಸ್ಕೇಪ್ ಆಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಸಂಜೆ 6.45ರ ಸಮಯಕ್ಕೆ ವಿರಾರ್ನ ಬೋಲಿಂಜ್ ಪ್ರದೇಶದಲ್ಲಿರುವ ಕೋಟಕ್ ಮಹೀಂದ್ರಾ ಎಟಿಎಂಗೆ ಹಣ ತುಂಬಿಸಲು ಗಾಡಿಯಲ್ಲಿ ತೆರಳಲಾಗಿತ್ತು. ಗಾಡಿಯಲ್ಲಿ ಚಾಲಕನೊಂದಿಗೆ ವ್ಯವಸ್ಥಾಪಕ ಮತ್ತು ಸಶಸ್ತ್ರ ಭದ್ರತಾ ಸಿಬ್ಬಂದಿಯೂ ಇದ್ದರು. ಎಟಿಎಂಗೆ ಹಣ ತುಂಬಿಸಲು ವ್ಯವಸ್ಥಾಪಕರು ಮತ್ತು ಭದ್ರತಾ ಸಿಬ್ಬಂದಿ ಗಾಡಿಯಿಂದ ಕೆಳಗಿಳಿದು ಹೋಗಿದ್ದಾರೆ. ಅದೇ ಸಮಯಕ್ಕೆ ಕಾಯುತ್ತಿದ್ದ ಚಾಲಕ, ತಕ್ಷಣ ಗಾಡಿ ಸ್ಟಾರ್ಟ್ ಮಾಡಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ದೀಪಾವಳಿ ಹಬ್ಬದ ಪ್ರಯುಕ್ತ ಹಣ ವಿತ್ಡ್ರಾ ಜಾಸ್ತಿ ಆಗುತ್ತದೆಯೆಂದು ಹೆಚ್ಚು ಹಣವನ್ನು ಗಾಡಿಯಲ್ಲಿ ತರಲಾಗಿತ್ತು. ಚಾಲಕ ಗಾಡಿಯನ್ನು ತೆಗೆದುಕೊಂಡು ಹೋಗುವಾಗ ಗಾಡಿಯಲ್ಲಿ ಸುಮಾರು 4.25 ಕೋಟಿ ರೂಪಾಯಿ ಹಣವಿತ್ತು. ಚಾಲಕನನ್ನು ಚೆಂಬೂರು ನಿವಾಸಿ ರೋಹಿತ್ ಬಬ್ಬನ್ (26) ಎಂದು ಗುರುತಿಸಲಾಗಿದೆ.
ಆರೋಪಿ ಚಾಲಕ ವ್ಯಾನನ್ನು ನಿಲ್ಲಿಸಿ ಟ್ರಂಕ್ ನಲ್ಲಿರುವ ಹಣವನ್ನು ಬೇರೆ ವಾಹನಕ್ಕೆ ತುಂಬಿಸಿ ಎಸ್ಕೇಪ್ ಆಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನ ಜೊತೆಗಿದ್ದ ಸೆಕ್ಯುರಿಟಿ ಗಾರ್ಡ್ ಮತ್ತು ಸಿಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 392ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ನಗರದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.