ಮಂಗಳೂರು: ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಗಂಡ ಹಲ್ಲೆ ಮಾಡಿರುವ ಬಗ್ಗೆ ಮಹಿಳೆಯೊಬ್ಬರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿ ವಾಸವಾಗಿರುವ ದಿಲ್ ಫಾಝ್ ನನ್ನು ನಾನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೆ. ನನ್ನ ತಂದೆಯ ವಿರೋಧದ ಮಧ್ಯೆಯೂ 2019ರ ಎಪ್ರಿಲ್ 20ರಂದು ನಮ್ಮ ಮದುವೆಯಾಗಿತ್ತು. ಈ ಸಂದರ್ಭ ತಂದೆಯು 22 ಪವನ್ ಚಿನ್ನಾಭರಣವನ್ನು ನೀಡಿದ್ದರು.
ಅದಲ್ಲದೆ ವಾಚ್ ಖರೀದಿಸಲೆಂದು 50 ಸಾವಿರ ರೂ. ಪಡೆದಿದ್ದ. ಆ ಬಳಿಕ ದಿಲ್ಫಾರ್ ಇತರ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿರುವುದು ನನ್ನ ಗಮನಕ್ಕೆ ಬಂದಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ದಿಲ್ ಫಾಝ್ 2019ರ ಸೆಪ್ಟೆಂಬರ್ 24ರಿಂದ ನನಗೆ ದೈಹಿಕವಾಗಿ ಹಲ್ಲೆ ನಡೆಸಿ ಮಾನಸಿಕವಾಗಿ ಹಿಂಸಿಸುತ್ತಿದ್ದ. ಇದಕ್ಕೆ ಈತನ ತಂದೆ ಅಬೂಬಕರ್ ಕೂಡ ಸಹಕರಿಸುತ್ತಿದ್ದರು. 2024ರ ನವೆಂಬರ್ 8ರಂದು ದಿಲ್ಫಾಝ್ ನನಗೆ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಉಳ್ಳಾಲ ಮಾಸ್ತಿಕಟ್ಟೆಯ ನೊಂದ ಯುವತಿ ನವೆಂಬರ್ 21ರಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿದ್ದಾರೆ.


