ಪಂಜ: ನಿನ್ನೆ ತಮ್ಮ ಮನೆಯ ಬಳಿಯಿದ್ದ ಮರದ ರೆಂಬೆ ಕಡಿಯುತ್ತಿದ್ದ ವೇಳೆ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಸುಳ್ಯ ತಾಲೂಕಿನ ಖ್ಯಾತ ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ಅವರು ಇಂದು ಬೆಳಗ್ಗಿನ ಜಾವ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಿನ್ನೆ ಪಂಜದ ಕೃಷ್ಣನಗರದಲ್ಲಿರುವ ತಮ್ಮ ಮನೆಯ ಬಳಿ ಇರುವ ಮರದ ರೆಂಬೆ ಕಡಿಯಲೆಂದು ಮಹಾಬಲ ಕುಳ ಅವರು ಮರ ಏರಿದ್ದರು. ಈ ವೇಳೆ ಮರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 5-30ಕ್ಕೆ ಅವರು ಸಾವನ್ನಪ್ಪಿದ್ದಾರೆ.
ಮಹಾಬಲ ಕುಳ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪಂಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಅವರು ಈ ಹಿಂದೆ ಬೆಳ್ಳಾರೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದರು.
ಚಿತ್ರಕಲಾ ಶಿಕ್ಷಕರಾಗಿ ಮಾತ್ರವಲ್ಲದೇ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಅವರು ಸಂಘಟಕರಾಗಿ, ನಾಟಕ ನಿರ್ದೇಶಕರಾಗಿ, ನಿರೂಪಕರಾಗಿಯೂ ಗುರುತಿಸಿಕೊಂಡಿದ್ದರು.