ಚಿಕ್ಕಮಗಳೂರು; ಡಿ.6 ರಿಂದ ಡಿ.8 ರ ವರೆಗೆ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ದತ್ತ ಪಾದುಕೆ ಪೂಜೆ ನೆರವೇರಿಸಲು ದತ್ತಪೀಠ ವ್ಯವಸ್ಥಾಪನಾ ಸಮಿತಿ ವತಿಯಿಂದ ಇಬ್ಬರು ಅರ್ಚಕರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ದತ್ತಪೀಠದ ಹಿಂದೂ ಅರ್ಚಕರಾಗಲು ಇಬ್ಬರು ಅರ್ಜಿ ಹಾಕಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಅರ್ಜಿ ಹಾಕಿದ್ದರು.
ದತ್ತಜಯಂತಿಗೆ ಹಿಂದೂ ಅರ್ಚಕರ ನೇಮಕ ತಾತ್ಕಾಲಿಕವಾಗಿದ್ದು, ಮೂರು ದಿನದ ದತ್ತಜಯಂತಿ ಕಾರ್ಯಕ್ರಮಕ್ಕಾಗಿ ಮಾತ್ರ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹಿಂದೂ ಮುಸ್ಲಿಮರ ಸೌಹಾರ್ದದ ಧಾರ್ಮಿಕ ಕೇಂದ್ರವಾಗಿದ್ದ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಕಳೆದ ಮೂರು ದಶಕಗಳಿಂದ ವಿವಾದಿತ ಕೇಂದ್ರವಾಗಿದ್ದು, ಈ ಸಂಬಂಧದ ಪ್ರಕರಣ ನ್ಯಾಯಾಲಯದಲ್ಲಿದೆ.