ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಾಯಿಬ್ರಕಟ್ಟೆಯ ಕಾಜ್ರಳ್ಳಿ ನಿವಾಸಿ ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಚೇತನ್ ಶೆಟ್ಟಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ
ಎಂಬಿಎ ಪದವಿ ಪಡೆದ ಅನಿಷಾ ಪೂಜಾರಿ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು,ಲಾಕ್ ಡೌನ್ ಕಾರಣದಿಂದ ಊರಿಗೆ ಮರಳಿದ್ದಳು. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ 5-6 ವರ್ಷಗಳಿಂದ ಪ್ರೀತಿಸುತ್ತಿದ್ದ ಚೇತನ್ ಶೆಟ್ಟಿ ಇದೀಗ ಬೇರೆ ಮದುವೆಯಾಗುವ ವಿಷಯ ಕೇಳಿ ಆಘಾತಕ್ಕೊಳಗಾದ ಅನಿಷಾ ಹಲವು ಬಾರಿ ಆತನನ್ನು ಮೊಬೈಲ್ನಲ್ಲಿ ಸಂಪರ್ಕಿಸಿದ್ದಳು.
ಆದರೆ ಹತ್ತು ಹಲವು ಸಬೂಬು ಹೇಳಿದ ಚೇತನ್ ಆಕೆಗೆ ಬೆದರಿಕೆ ಹಾಕಿದ್ದನಲ್ಲದೆ ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದ. ಇದರಿಂದಾಗಿ ಮನನೊಂದ ಅನಿಷಾ ಪೂಜಾರಿ ಡೆತ್ ನೋಟಿನ ಜತೆ ಅವನೊಂದಿಗೆ ಸಂಭಾಷಿಸಿದ ಆಡಿಯೋ ಕ್ಲಿಪ್ ಗಳನ್ನು ಇರಿಸಿ, ಚೇತನ್ ಗೆ ಸೇರಿದ ಹಾಡಿಯ ಮರವೊಂದಕ್ಕೆ ಕಳೆದ ಗೌರಿ ಹಬ್ಬದಂದು ಆತ್ಮ ಹತ್ಯೆಗೈದಿದ್ದಳು.
ಆರಂಭದಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು,ತದ ನಂತರ ಮೃತ ಅನಿಷಾಳ ಪರ ನ್ಯಾಯಕ್ಕಾಗಿ ಎದ್ದ ಸಂಘ ಸಂಸ್ಥೆಗಳ ಪ್ರತಿಭಟನೆಗಳ ಹೋರಾಟದಿಂದಾಗಿ ಚೇತನ್ ಶೆಟ್ಟಿಯನ್ನು ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಿ ಕೊಂಡಿದ್ದರು.
ತನ್ನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಪ್ರಿಯಕರ ಚೇತನ್ ಶೆಟ್ಟಿಯನ್ನು ಬೆಂಗಳೂರಿನಿಂದ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣದ ಜಾಡು ಹಿಡಿದ ಬ್ರಹ್ಮಾವರ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದರು. ಈ ನಡುವೆ ಆರೋಪಿ ಮೈಸೂರಿನಲ್ಲಿದ್ದಾನೆ ಎನ್ನುವ ಮಾಹಿತಿ ದೊರಕಿತು. ಈ ನಡುವೆ ಆತ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ನಂತರ ಅಲ್ಲಿಂದಲೇ ಪೊಲೀಸರು ಆತನನ್ನು ಸೆ. 2ರ ರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡಸುತ್ತಿದ್ದಾರೆ.