ಅನಂತಪುರ: ತನಗೆ ಈ ಮದುವೆ ಇಷ್ಟ ಇಲ್ಲ ಎಂದು ಹೆತ್ತವರಿಗೆ ಅನೇಕ ಬಾರಿ ಹೇಳಿದರು ಒಪ್ಪದಿದ್ದಾಗ ಕೊನೆಗೆ ಮದುವೆಯಿಂದ ತಪ್ಪಿಸಿಕೊಳ್ಳಲು ಮದುಮಗಳೊಬ್ಬಳು ಮಂಟಪದಲ್ಲಿ ಕೂತು ನನಗೆ ಕೊರೋನಾ ಇದೆ ಎಂದು ನಾಟಕವಾಡಿ ಎಲ್ಲರಿಗೆ ಶಾಕ್ ನೀಡಿದ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಪ್ರದೇಶದಲ್ಲಿ ನಡೆದಿದೆ.
ಧರ್ಮಾವರಂ ಪಟ್ಟಣದ ಯುವಕ ಮುಡಿಗುಬ್ಬಾ ಮಂಡಲದ ಯುವತಿಯನ್ನು ಕದಿರಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಿನ್ನೆ ವರಿಸಬೇಕಿತ್ತು. ಅದರಂತೆ ಎರಡು ಮನೆಯವರು ಎಲ್ಲ ತಯಾರಿಯನ್ನು ಮಾಡಿಕೊಂಡು ನಿನ್ನೆ ಮದುವೆ ಮಂಟಪಕ್ಕೆ ಆಗಮಿಸಿದ್ದರು.
ಮದುವೆಯ ಮೊದಲು ಮತ್ತು ಮದುವೆ ಮಂಟಪದಲ್ಲೂ ಈ ಮದುವೆ ನನಗೆ ಇಷ್ಟವಿಲ್ಲ ಎಂದು ವಧು ತನ್ನ ಪಾಲಕರಿಗೆ ಅನೇಕ ಬಾರಿ ಹೇಳಿದ್ದಾಳೆ. ಆದರೆ ಅವರು ಇದನ್ನು ಕೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ.. ಮದುವೆ ತಯಾರಿ ಕಡೆಗೆ ಗಮನ ಹರಿಸಿದ್ದರು. ಇತ್ತ ಏನು ಮಾಡಬೇಕೆಂದು ದಿಕ್ಕು ತೋಚದ ವಧು, ಕೊನೆಗೆ ಪ್ರಸ್ತುತ ಸನ್ನಿವೇಶವನ್ನು ಬಂಡವಾಳ ಮಾಡಿಕೊಂಡು ತನಗೆ ಕರೊನಾ ಇದೆ ಎಂದು ಸುಳ್ಳು ಹೇಳಿದ್ದಾಳೆ.
ಬಳಿಕ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ ನಿಜಾಂಶ ಹೊರಬಂದಿದೆ. ಪಾಸಿಟಿವ್ ಆಗಿರುವ ಬಗ್ಗೆ ವರದಿ ಕೇಳಿದಾಗ ಇಲ್ಲವೆಂದು ಹೇಳಿದ್ದಾಳೆ. ಮದುವೆ ಇಷ್ಟವಿಲ್ಲದಿದ್ದಕ್ಕೆ ಕರೊನಾ ನಾಟಕವಾಡಿದ್ದಾಳೆಂದು ಎಲ್ಲರಿಗೂ ಗೊತ್ತಾಗಿದೆ. ಇದು ವರನ ಪಾಲಕರ ಗಮನಕ್ಕೆ ಬಂದು ಅವರು ವಧುವಿನ ವಿರುದ್ಧ ದೂರು ನೀಡಿದ್ದಾರೆ. ಮದುವೆ ಬೇಡವೆಂದರೆ ಮೊದಲೇ ಹೇಳಬೇಕಿತ್ತು. ಇದೀಗ ಎಲ್ಲ ಸಿದ್ಧತೆ ಮಾಡಿಕೊಂಡ ಬಳಿಕ ಹೀಗೆ ಹೇಳಿದರೆ ಏನು ಅರ್ಥ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಯುವತಿ ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ 3 ಲಕ್ಷ ರೂ. ಹಣ ಕಳುಹಿಸಿರುವುದಾಗಿ ವರ ಹೇಳಿದ್ದು, ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಕೊನೆಯಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಕದಿರಿ ಎಸ್ಐ, ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಳ್ಳುವುದು ಸರಿಯಲ್ಲ. ಹಣವನ್ನು ಹಿಂದಿರುಗಿಸಲಾಗಿದ್ದು, ಮದುವೆ ವಿವಾದ ಬಗೆಹರಿದಿದೆ ಎಂದು ತಿಳಿಸಿದ್ದಾರೆ.