ಕೊಡಗು; ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಡಿ.24ರ ಸಂಜೆ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಸೋಮವಾರಪೇಟೆ ತಾಲ್ಲೂಕು ಆಲೂರು ಸಿದ್ದಾಪುರದ ಯೋಧ ದಿವಿನ್ ಗಂಭೀರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಶಾಸಕ ಡಾ ಮಂತರ್ ಗೌಡ ಅವರು ಸೇನಾ ವೈದ್ಯರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ನಿವಾಸಿ ದಿವಂಗತ ಪ್ರಕಾಶ್ ಹಾಗೂ ಜಯ ದಂಪತಿ ಪುತ್ರ ದಿವಿನ್ (28) ಅವರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಪಘಾತಕ್ಕೆ ಸಿಲುಕಿ ಚಿಂತಾಜನಕರಾಗಿ ಶ್ರೀನಗರ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಭಾರತೀಯ ಸೇನೆಯಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ದಿವಿನ್ ತಾಯಿ ಜಯ ಅವರು ಗುರುವಾರ ಸಂಜೆ ಶ್ರೀನಗರಕ್ಕೆ ತೆರಳಿದ್ದಾರೆ. ಶಾಸಕ ಡಾ ಮಂತರ್ ಗೌಡ ಅವರು
ಸೇನಾ ವೈದ್ಯರಿಗೆ ಕರೆ ಮಾಡಿದಾಗ ಆತನಿಗೆ ಚಿಕಿತ್ಸೆ ನೀಡುತ್ತಿರುವ ಶಿವಮೊಗ್ಗ ಮೂಲದ ಸೇನಾ ವೈದ್ಯರು ದಿವಿನ್ ರವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ದಿವಿನ್ ತನ್ನ ತಾಯಿಗೆ ಏಕೈಕ ಆಸರೆಯಾಗಿದ್ದು, 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿದ್ದು, 2025ರ ಫೆಬ್ರವರಿಯಲ್ಲಿ ವಿವಾಹ ನಿಶ್ಚಿಯವಾಗಿತ್ತು. ಆಮಂತ್ರಣ ಪತ್ರ ಕೂಡ ಮುದ್ರಣಗೊಂಡಿದೆ. ಅಷ್ಟರಲ್ಲಿ ದುರಂತ ನಡೆದಿದೆ. ಸದ್ಯ ದಿವಿನ್ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.