ದಾವಣಗೆರೆ: ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮೊನ್ನೆಯಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಈ ಶಾಕ್ ನಿಂದ ಬಿಜೆಪಿ ಹೊರ ಬರುವ ಮುನ್ನವೇ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ.
ದಾವಣಗೆರೆ ಜಿಲ್ಲೆಯ ಉತ್ತರ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ಎಸ್ ಎ ರವೀಂದ್ರನಾಥ್ ತಾನು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಹೊಸಬರಿಗೆ ಅವಕಾಶ ಸಿಗಲಿ ಎಂಬುದಾಗಿ ಹೇಳುವ ಮೂಲಕ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಎಸ್ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅವರ ನಂತ್ರ ಬಿಜೆಪಿಯಲ್ಲಿ ಹಿರಿಯ ನಾಯಕ ನಾನೇ ಆಗಿದ್ದೇನೆ. ಹೊಸಬರಿಗೆ ಅವಕಾಶ ಸಿಗಲಿ ಎಂಬುದಾಗಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದಿದ್ದಾರೆ.
ಅನಾರೋಗ್ಯ, ವಯಸ್ಸಾದ ಕಾರಣದಿಂದ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂಬುದಾಗಿ ವರಿಷ್ಠರ ಗಮನಕ್ಕೂ ತಂದಿದ್ದೇನೆ. ಬೆಂಗಳೂರಿನ ಕೋರ್ ಕಮಿಟಿ ಸಭೆಯಲ್ಲಿ ವಿಚಾರ ತಿಳಿಸಿದ್ದೇನೆ. ನನಗೆ ಟಿಕೆಟ್ ಬೇಡವೆಂದು ಹೇಳಿರುವುದಾಗಿ ತಿಳಿಸಿದ್ದಾರೆ.
ನನಗೆ ಟಿಕೆಟ್ ಬೇಡ, ಹೊಸಬರಿಗೆ ಕೊಡಿ ಎಂಬುದಾಗಿ ತಿಳಿಸಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ. ಬೆಂಬಲಿಗರು, ಆಪ್ತರಿಗೆ ಈಗಾಗಲೇ ನನ್ನ ಚುನಾವಣಾ ರಾಜಕೀಯ ನೀವೃತ್ತಿಯ ಬಗ್ಗೆ ಹೇಳಿರುವುದಾಗಿ ತಿಳಿಸಿದರು. ಈ ಮೂಲಕ ಚುನಾವಣಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.