ಚಲಿಸುತ್ತಿದ್ದ ಬಸ್ನಿಂದ ಬೀಳುತ್ತಿದ್ದ ವೃದ್ಧನ ಸಾಹಸಿಕ ರಕ್ಷಣೆ: ಕ್ಲೀನರ್ ಸಮಯಪ್ರಜ್ಞೆಗೆ ನೆಟ್ಟಿಗರ ಮೆಚ್ಚುಗೆ
ಕೇರಳ: ಚಲಿಸುತ್ತಿದ್ದ ಖಾಸಗಿ ಬಸ್ ಹತ್ತಲು ಯತ್ನಿಸಿ ಸಮತೋಲನ ಕಳೆದುಕೊಂಡು ಬೀಳುತ್ತಿದ್ದ ವೃದ್ಧ ಪ್ರಯಾಣಿಕನೊಬ್ಬನನ್ನು ಬಸ್ ಕ್ಲೀನರ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ.
ಕಣ್ಣೂರಿನಿಂದ ಕುಟ್ಟಿಯತ್ತೂರಿಗೆ ತೆರಳುತ್ತಿದ್ದ ‘ಪಾರ್ವತಿ’ ಖಾಸಗಿ ಬಸ್ನಲ್ಲಿ ಶನಿವಾರ ಬೆಳಿಗ್ಗೆ 8.45ರ ಸುಮಾರಿಗೆ ‘ಪಾಠಮ್ ಮೈಲಿ’ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿದ ವೃದ್ಧ ದಿಢೀರ್ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಹಂತದಲ್ಲಿದ್ದರು. ಇದನ್ನು ತಕ್ಷಣವೇ ಗಮನಿಸಿದ ಬಸ್ ಸಿಬ್ಬಂದಿ (ಕ್ಲೀನರ್) ಅತುಲ್, ಅತ್ಯಂತ ಚುರುಕಿನಿಂದ ವೃದ್ಧನನ್ನು ಹಿಡಿದು ಬಸ್ನ ಒಳಗಡೆ ಎಳೆದುಕೊಂಡಿದ್ದಾರೆ. ಮತ್ತೊಬ್ಬ ಪ್ರಯಾಣಿಕನೂ ಇವರ ನೆರವಿಗೆ ಧಾವಿಸಿದ್ದು, ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದೆ.
ಈ ರೋಚಕ ದೃಶ್ಯಗಳು ಬಸ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಜ್ಜನ ಪಾಲಿಗೆ ದೇವರಂತೆ ಬಂದು ಜೀವ ರಕ್ಷಿಸಿದ ಅತುಲ್ ಅವರ ಸಾಹಸ ಮತ್ತು ಜಾಗರೂಕತೆಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


